ಉಡುಪಿ, ನ. 11 (DaijiworldNews/SM): ಅಷ್ಟಮಠಾಧೀಶರಲ್ಲಿ ಹಿರಿಯರಾಗಿದ್ದ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿಜಿಯವರಿಗೆ ಮರಣೋತ್ತರವಾಗಿ ಸಂದ ಪದ್ಮವಿಭೂಷಣ ಪ್ರಶಸ್ತಿಯನ್ನು ಉಡುಪಿಗೆ ತರಲಾಗಿದ್ದು, ಕೃಷ್ಣನೂರಿನಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.
ಉಡುಪಿಯ ಸಂಸ್ಕೃತ ಕಾಲೇಜಿನಿಂದ ಉಡುಪಿ ಕೃಷ್ಣ ಮಠಕ್ಕೆ ವಿಜೃಂಭಣೆಯ ಮೆರವಣಿಗೆಯ ಮೂಲಕ ತರಲಾಯಿತು. ಮರಣೋತ್ತರವಾಗಿ ಸಂದ ಪದ್ಮವಿಭೂಷಣ ಪ್ರಶಸ್ತಿಯನ್ನು ವಿಶ್ವೇಶ್ವರತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು ಸೋಮವಾರದಂದು ದೆಹಲಿಯಲ್ಲಿ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀ ಕೃಷ್ಣ ದೇವರಿಗೆ ಸರ್ಮಪಿಸಿ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಸರ್ಮಪಿಸಲಾಯಿತು.
ಬಳಿಕ ಬಹಿರಂಗ ಸ್ವಾಗತ ಸಮಾರಂಭವು ರಥಭೀದಿಯಲ್ಲಿ ನಡೆಯಿತು. ಉಡುಪಿ ಶಾಸಕ ರಘುಪತಿ ಭಟ್ ಪ್ರಶಸ್ತಿ ಪತ್ರವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಈಶಪ್ರೀಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸೋದೆ ಮಠಾಧೀಶರಾದ ವಿಶ್ವ ವಲ್ಲಭ ತೀರ್ಥ ಶ್ರೀ ಪಾದರು ಮತ್ತು ಪಲಿಮಾರು ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಉಡುಪಿ ಶಾಸಕ ರಘುಪತಿ ಭಟ್, ನಗರಸಭಾಧ್ಯಕ್ಷ್ಯೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಶ್ಯಾಮಲಾ ಕುಂದರ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.