ಮಂಗಳೂರು, ನ.11 (DaijiworldNews/PY): ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಬೇಸಾಯ ಮರೆಯಾಗಿದೆ. ಹಾಗಿರುವಾಗ ನಗರಗಳಲ್ಲಿ ಬೇಸಾಯ ಮಾಡುವವರು ಸಿಗುವುದು ಅಸಾಧ್ಯ. ಆದರೆ, ಈ ನಡುವೆ ಮಂಗಳೂರಿನಲ್ಲಿ ರೈತರೊಬ್ಬರು ನಗರದ ಬೇಸಾಯ ಮಾಡಿ ಗಮನ ಸೆಳೆದಿದ್ದಾರೆ.
ಕರ್ನಾಟಕ ಸರಕಾರಿ ವಿಮಾ ಇಲಾಖೆಯ ನಿವೃತ್ತ ಅಧೀಕ್ಷಕ ಫ್ರಾನ್ಸಿಸ್ ಸಲ್ಡಾನ್ಹಾ ಅವರು ಕಳೆದ 30 ವರ್ಷಗಳಿಂದ ಚಿಲಿಂಬಿಯ ಮಲರಾಯ ದೇವಸ್ಥಾನ ರಸ್ತೆಯ ಸಮೀಪ ವಾಸವಿದ್ದಾರೆ. ಇವರು ಕಳೆದ 30 ವರ್ಷಗಳಿಂದ ನಗರದಲ್ಲಿರುವ ಗದ್ದೆಗಳಲ್ಲಿ ವ್ಯವಸಾಯ ಮಾಡುತ್ತಿದ್ದು, ರೈತಾಪಿ ವರ್ಗಕ್ಕೆ ಮಾದರಿಯಾಗಿದ್ದಾರೆ.
1.20 ಎಕ್ರೆಯ ಪೈಕಿ ಒಟ್ಟು 5 ಗದ್ದೆಗಳಿದ್ದು, ಇವುಗಳಲ್ಲಿ ಹಲವು ವರ್ಷಗಳಿಂದ ಭತ್ತದ ಕೃಷಿ ಮಾಡಲಾಗುತ್ತಿದೆ. ಫ್ರಾನ್ಸಿಸ್ ಅವರ ಚಿಲಿಂಬಿಯ ಮನೆಯಲ್ಲಿ 10 ವರ್ಷಗಳ ಹಿಂದೆ ಒಂದು ಜೊತೆ ಕೋಣಗಳನ್ನೂ ಸಾಕಲಾಗುತ್ತಿತ್ತು. ಕೋಣಗಳ ಸಹಾಯದಿಂದ ಉಳುಮೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕೋಣ ಸಾಕುವುದು ಕಷ್ಟವಾದ ಕಾರಣ ಯಂತ್ರಗಳ ಮೊರೆ ಹೋಗಿದ್ದಾರೆ. ಇನ್ನು ಮಳೆಗಾಲದ ಸಂದರ್ಭ ಮಳೆ ನೀರು ಸಾಕಾದರೆ, ಉಳಿದ ಸಮಯಕ್ಕೆ ಬಾವಿ ನೀರು ಅಗತ್ಯಕ್ಕೆ ತಕ್ಕಷ್ಟು ಲಭ್ಯವಿದೆ. ನಿಯಮಿತವಾಗಿ ಯೂರಿಯಾ ಹಾಕುವ ಕಾರಣ ಭತ್ತದ ಬೆಳೆ ಉತ್ತಮವಾಗಿದೆ.
ಕೃಷಿ ಮಾಡುವ ವೇಳೆ ಫ್ರಾನ್ಸಿಸ್ ಅವರೇ ಮುಂದೆ ನಿಂತು ಕೆಲಸ ಮಾಡುತ್ತಾರೆ. ಇದರೊಂದಿಗೆ ಟಿಲ್ಲರ್ ಉಳುಮೆ ಮಾಡುವ ಸಂದರ್ಭ ಒಂದಿಬ್ಬರು, ನಾಟಿ ಮಾಡುವಾಗ ಕೆಲವರು, ಕೊಯ್ಲಿನ ಸಂದರ್ಭ 15 ಜನ, ಭತ್ತ ಹೊಡೆಯಲು 14 ಮಂದಿಯ ಅಗತ್ಯವಿದೆ.
ಕಳೆದ ವರ್ಷ ಸುಮಾರು 12 ಕ್ವಿಂಟಾಲ್ ಭತ್ತ ಬೆಳೆಯಲಾಗಿದ್ದು, ಬೈಹುಲ್ಲು ಸಹ ಮಾರಾಟ ಮಾಡಲಾಗಿದೆ. ಹಲವು ಕಾರಣಗಳಿಂದ ರೈತಾಪಿ ವರ್ಗವೇ ಬೇಸಾಯದಿಂದಲೇ ದೂರವಾಗುತ್ತಿರುವ ಈ ಸಂದರ್ಭ ನಿವೃತ್ತ ನೌಕರರೋರ್ವರು ಬೇಸಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಇತರರಿಗೆ ಮಾರ್ಗದರ್ಶಿಯಾಗಿದೆ.