ಉಳ್ಳಾಲ, ನ.11 (DaijiworldNews/PY): ಕರ್ನಾಟಕ ಸರ್ಕಾರ ತೈಲ ದರ ಇಳಿಕೆಗೆ ಕ್ರಮ ಕೈಗೊಂಡ ಬೆನ್ನಲ್ಲೇ ಜಾಲ್ಸೂರು, ತಲಪಾಡಿ ಸೇರಿದಂತೆ ಕೇರಳ, ಕರ್ನಾಟಕ ಗಡಿ ಪ್ರದೇಶಗಳಲ್ಲಿನ ಪೆಟ್ರೋಲ್ ಬಂಕ್ಗಳಲ್ಲಿ ವಾಹನ ದಟ್ಟಣೆ ಕಾಣಿಸುತ್ತಿದೆ.
ಸಾಂದರ್ಭಿಕ ಚಿತ್ರ
ಇನ್ನು ಕೇರಳ ಭಾಗದ ಬಂಕ್ಗಳಲ್ಲಿ ಡೀಸೆಲ್ ದರ 8.5 ರೂ ಹಾಗೂ ಪೆಟ್ರೋಲ್ ದರ 5.5 ರೂ. ವ್ಯತ್ಯಾಸ ಇರುವ ಕಾರಣ ಬಿಕೋ ಎನ್ನುತ್ತಿವೆ. ಒಂದು ವಾರದಿಂದ ಕೇರಳ ಪೆಟ್ರೋಲ್ ಬಂಕ್ನಲ್ಲಿ ಗ್ರಾಹಕರಿಲ್ಲದೇ ವ್ಯವಹಾರ ನಷ್ಟವಾಗಿದ್ದು, 2,000 ರೂ. ಲೀ. ದಾಟುವುದು ಕಷ್ಟವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಂಕ್ ಮೇಲ್ವಿಚಾರಕ ತಾಜುದ್ದೀನ್ ಹಾಗೂ ಸಿಬ್ಬಂದಿ ಹರೀಶ್, ಪಂಪ್ಗೆ ಶೇ.75ರಷ್ಟು ನಷ್ಟವಾಗಿದ್ದು, ಸಿಬ್ಬಂದಿ ಕಡಿತ ಮಾಡಿದ್ದಾರೆ. ಗ್ರಾಹಕರು ಬಂದು ಬೆಲೆ ವಿಚಾರಿಸಿ ಹೋಗುತ್ತಿದ್ದಾರೆ. ಈ ಬಗ್ಗೆ ಕೇರಳ ಸರ್ಕಾರ ಗಮನಹರಿಸಿ ಅಬಕಾರಿ ಸುಂಕ ಕಡಿಮೆ ಮಾಡಿದ್ದಲ್ಲಿ ಮಾತ್ರವೇ ವ್ಯವಹಾರ ನಡೆಸಲು ಸಾಧ್ಯ ಎಂದಿದ್ದಾರೆ.
ತಲಪಾಡಿಯಲ್ಲಿ ಕರ್ನಾಟಕ ಭಾಗದಲ್ಲಿನ ಬಂಕ್ ಟೋಲ್ ಗೇಟ್ಗೂ ಮುನ್ನ ಇರುವ ಕಾರಣ ಕೇರಳ ಭಾಗದ ವಾಹನ ಚಾಲಕರು ಇಲ್ಲಿಗೆ ಬಂದು ಇಂಧನ ತುಂಬಿಸಿ ಹೋಗುತ್ತಿದ್ದಾರೆ. ಈ ಬಂಕ್ಗೆ ಹೆಚ್ಚುವರಿ ಸಿಬ್ಬಂದಿಯ ನೇಮಕ ಅಗತ್ಯ ಎಂದು ಬಂಕ್ ಮೇಲ್ವಿಚಾರಕ ಮಹೇಶ್ ಹೇಳಿದ್ದಾರೆ.