ಉಪ್ಪಿನಂಗಡಿ, ನ.11 (DaijiworldNews/PY): ಮುಖ ತೊಳೆಯಲೆಂದು ಇಳಿದ ವ್ಯಕ್ತಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಕಣ್ಮರೆಯಾದ ಘಟನೆ ಉಪ್ಪಿನಂಗಡಿಯ ಬರ್ಚಿನಹಳ್ಳ ಎಂಬಲ್ಲಿನ ಗುಂಡ್ಯ ಹೊಳೆಯಲ್ಲಿ ನ.10ರ ಬುಧವಾರದಂದು ನಡೆದಿದೆ.
ರಾಜಸ್ತಾನ ಮೂಲದ ಸೀತಾರಾಮ್ (19) ಕಣ್ಮರೆಯಾದ ಯುವಕ.
ಸೀತಾರಾಮ್ ಬೆಂಗಳೂರಿನಿಂದ ವಾಹನಗಳ ಬಿಡಿಭಾಗಗಳನ್ನು ಮಂಗಳೂರಿನ ಮಾರಾಟ ಮಳಿಗೆಗೆ ವಿತರಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಬರ್ಚಿನಹಳ್ಳ ಬಳಿಯ ಹೆದ್ದಾರಿ ಬದಿ ಕಾಣುವ ಗುಂಡ್ಯ ಹೊಳೆಯಲ್ಲಿ ಬಂಡೆ ಕಲ್ಲಿನ ಮೇಲೆ ನಿಂತು ಮುಖ ತೊಳೆದ ಸೀತಾರಾಮ್, ನಂತರ ವಾಹನ ಚಾಲಕ ಧರ್ಮರಾಜ್ (30) ಎನ್ನುವವರ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಸೀತಾರಾಮ್ ಕಾಲು ಜಾರಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದಾರೆ.
ಘಟನೆಯ ಬಗ್ಗೆ ತಿಳಿದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಹುಡುಕಾಟ ನಡೆಸಿದ್ದರೂ ಯುವಕ ಪತ್ತೆಯಾಗಲಿಲ್ಲ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಗುರುವಾರ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.