ಕೋಟ, 11 (DaijiworldNews/MS): ಇತ್ತೀಚಿಗೆ ಶೆಡ್ಡಿನೊಳಗೆ ಸಂಭವಿಸಿದ್ದ ಸ್ಪೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪತಿ ಹಾಗೂ ಪತ್ನಿಯ ಪೈಕಿ ಪತಿ ಬೇಳೂರು ಪಡುಮುಂಡು ದನ್ಯಾಡಿ ಹೆಬ್ಬಾಗಿಲು ಮನೆ ನಿವಾಸಿ ದಿನೇಶ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪತ್ನಿ ವಸಂತಿ ಶೆಟ್ಟಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ದಿನೇಶ್ ಶೆಟ್ಟಿ ವಾಸ್ತವ್ಯದ ಮನೆಯ ಕಾರ್ ಶೆಡ್ನಲ್ಲಿ ಯಾವುದೋ ಸ್ಪೋಟಕ ವಸ್ತು ಸಿಡಿದು ಬೆಂಕಿ ಅನಾಹುತವಾಗಿದ್ದು ದಿನೇಶ ಶೆಟ್ಟಿಯವರ ಭಾಗಶಃ ದೇಹ ಸುಟ್ಟು ಹೋಗಿದ್ದರು. ಸ್ಫೋಟದ ರಭಸಕ್ಕೆ ಮನೆಯ ಕಾರ್ ಸಿಟೌಟ್ ನ ಮೇಲ್ಚಾವಣಿಯಲ್ಲಿದ್ದ ಲೈಟ್ ಹಾಗೂ ಗೋಡೆಯಲ್ಲಿದ್ದ ಲೈಟ್ ಮತ್ತು ಸ್ವೀಚ್ಗಳು ಸುಟ್ಟಿದ್ದು, ಕಾರ್ ಶೆಡ್ಗೆ ಹೊಂದಿಕೊಂಡಿರುವ ಅಡುಗೆ ಮನೆಯ ಕಿಟಕಿಯ ಗಾಜು ಬಿರುಕು ಬಿಟ್ಟಿತ್ತು. ಕಾರ್ ಶೆಡ್ನಲ್ಲಿದ್ದ ಸ್ಕೂಟಿಯು ಭಾಗಶ: ಸುಟ್ಟು ಹೋಗಿತ್ತು. ಅವರ ಕಾರಿನ ಹೊರಭಾಗ ಸುಟ್ಟು ಹೋಗಿತ್ತು. ದಿನೇಶ ಶೆಟ್ಟಿ ಹಾಗೂ ಅವರ ಪತ್ನಿ ವಸಂತಿ ಶೆಟ್ಟಿಯವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿ ಚಿಕಿತ್ಸೆಗಾಗಿ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಫಲ ನೀಡದೆ ದಿನೇಶ ಶೆಟ್ಟಿ ಬುಧವಾರ ಮೃತಪಟ್ಟಿದ್ದಾರೆ.