ಮಂಗಳೂರು, ನ. 10 (DaijiworldNews/SM): ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗೆ 4 ವರ್ಷ ಜೈಲು ಹಾಗೂ 15,000 ರೂ.ದಂಡ ವಿಧಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಬ್ಯಾಂಕ್ ಉದ್ಯೋಗಿ ಗ್ರೇಸ್ ಫೆರ್ನಾಂಡಿಸ್ ಪ್ರಕರಣದ ಆರೋಪಿಯಾಗಿದ್ದು, ತೆರೆಸಾ ಡಿ’ಸೋಜಾ ಎಂಬವರಿಗೆ 5 ಲ.ರೂ. ವಂಚನೆಗೆ ಒಳಗಾದವರಾಗಿದ್ದಾರೆ.
ತೆರೆಸಾ ಡಿ’ಸೋಜಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತೆರೆಸಾ ಡಿ’ಸೋಜ ಎಫ್ ಡಿಗೆ ಹಾಕಲು ಕೊಟ್ಟ ಹಣಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಶೀದಿ ನೀಡಿ ವಂಚನೆ ನಡೆಸಿದ್ದರು. ಬ್ಯಾಂಕ್ ಗೆ ತರೆಳಿ ಖಾತೆಯ ಬಗ್ಗೆ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಬಯಲಿಗೆ ಬಂದಿದೆ. ಖಾತೆಯಲ್ಲಿ ಇರಬೇಕಾಗಿದ್ದ 5,46, 650 ರೂ. ಬದಲು ಕೇವಲ 15, 571 ರೂಪಾಯಿಗಳಷ್ಟೇ ಇತ್ತು. ಈ ಬಗ್ಗೆ ಆರೋಪಿ ಮನೆಗೆ ಹೋಗಿ ವಿಚಾರಿಸಿದಾಗ ಆರೋಪಿ ಹಾಗೂ ಆಕೆಯ ಪತಿಯಿಂದ ತೆರೆಸಾ ಡಿಸೋಜ ಎಂಬವರಿಗೆ ಜೀವಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2011ರ ಮಾ.14ರಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ದೋಷಮುಕ್ತ ಎಂದು ಘೋಷಿಸಿತ್ತು. ಇದಾದ ಬಳಿಕ ನ್ಯಾಯಾಲಯದ ತೀರ್ಪಿನ ಬಗ್ಗೆ ಸರಕಾರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ. ಬ್ಯಾಂಕ್ ನಿಂದ ದಾಖಲೆಗಳನ್ನು ಕಳವು ಮಾಡಿದ ಅಪರಾಧಕ್ಕೆ 2 ವರ್ಷ ಸಜೆ ನೀಡಲಾಗಿದೆ. 2,000 ರೂಪಾಯಿ ದಂಡ ಪಾವತಿಸಲು ತಪ್ಪಿದರೆ 2 ತಿಂಗಳು ಸಜೆ ವಿಧಿಸಲು ಆದೇಶ ನೀಡಲಾಗಿದೆ. ನಕಲಿ ದಾಖಲಿ ಸೃಷ್ಟಿಗೆ 1 ವರ್ಷ ಸಜೆ, 1 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಸಜೆ ವಿಧಿಸಲಾಗಿದೆ.
ನಕಲಿ ದಾಖಲೆಯನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್ ಸಿಬ್ಬಂದಿಯಾಗಿ ಗ್ರಾಹಕರಿಗೆ ನಂಬಿಕೆ ದ್ರೋಹ, ವಂಚನೆ ಎಸಗಿದ ಅಪರಾಧಗಳಿಗೆ ತಲಾ ನಾಲ್ಕು ವರ್ಷ ಸಜೆ, 3 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲವಾದರೆ 2 ತಿಂಗಳ ಸಜೆ ಘೋಷಿಸಲಾಗಿದೆ.
ತೆರೆಸಾ ಡಿಸೋಜಾರಿಗೆ 10,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಬಿ. ಶೇಖರ ಶೆಟ್ಟಿ ವಾದ ಮಂಡಿಸಿದ್ದಾರೆ. ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ರಿಂದ ತೀರ್ಪು ನೀಡಿದ್ದಾರೆ.