ಮಂಗಳೂರು, ನ 10 (DaijiworldNews/MS): ಅನುವಾದ ಕೇಂದ್ರಿತ ಯೋಜನೆಗಳಿಗಾಗಿಯೇ ಪತ್ರಕರ್ತರು, ವಿದ್ವಾಂಸರು ಹಾಗೂ ಬರಹಗಾರರನ್ನೊಳಗೊಂಡ ಸಮಾನಮನಸ್ಕರ ಗುಂಪು "ಬಹುವಚನ ಎಂಬ ಪ್ರಕಾಶನ ಸಂಸ್ಥೆಯೊಂದನ್ನು ಹುಟ್ಟುಹಾಕಿದೆ. ಸಾಮೂಹಿಕ ಸ್ಮೃತಿಗೆ ಅಗತ್ಯವೆನಿಸುವ ಅನ್ಯಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವುದು, ವರ್ತಮಾನಕ್ಕೆ ಪ್ರಸ್ತುತವೆನಿಸುವ ಹಳೆಯ ಕನ್ನಡದ್ದೇ ಕೃತಿಗಳ ಮರು ಆವೃತ್ತಿಗಳನ್ನು ರೂಪಿಸುವುದು ಹಾಗೂ ಕನ್ನಡದಿಂದ ಹೊರಭಾಷೆಗಳಿಗೆ ಇಂಥ ಸಂಬಂಧ ಕಲ್ಪಿಸುವುದು ಮಾತ್ರವಲ್ಲ, ಈ ಸಂಗತಿಗಳಿಗೆ ಹೆಣೆದುಕೊಂಡಂತೆಯೇ ಹೊಸ ಕೃತಿಗಳನ್ನು ರೂಪಿಸುವುದು ಬಹುವಚನದ ಪ್ರಾರಂಭಿಕ ಉದ್ದೇಶವಾಗಿದ್ದು ಇದರೊಂದಿಗೆ ಜೊತೆಗೆ ಕನ್ನಡದ ವಿಶಿಷ್ಟ ಸ್ವತಂತ್ರ ಕೃತಿಗಳ ಪ್ರಕಟಣೆಯೂ ಇರಲಿದೆ. ಸಧ್ಯ ಬಹುವಚನ ತನ್ನ ಮೊದಲ ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ.
ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ದೇಶಕ, ಹಾಗೂ ಉಡುಪಿ ಘಟಕದ ಮುಖ್ಯಸ್ಥರಾಗಿರುವ 'ಕಿಶೂ ಬಾರ್ಕೂರು' ಕಾವ್ಯನಾಮದಿಂದ ಪರಿಚಿತರಾಗಿರುವ ಕಿಶೋರ್ ಕುಮಾರ್ ಜೀವ ಕೊಡಲೇ? ಚಹ ಕುಡಿಯಲೇ? ಅನುವಾದಿತ ಕೃತಿಯೂ ಬಿಡುಗಡೆಗೊಂಡಿದೆ.
ಬಹುವಚನದ ಪ್ರಕಟಣೆಗಳು
ಕೃತಿ: ಜೀವ ಕೊಡಲೇ? ಚಹ ಕುಡಿಯಲೇ?
ದಾಮೋದರ ಮಾವಜೋ
ಕನ್ನಡಕ್ಕೆ: ಕಿಶೂ ಬಾರ್ಕೂರು
ಕಿಶೂ ಬಾರ್ಕೂರು
ಕೃತಿ: ಜೀವ ಕೊಡಲೇ? ಚಹ ಕುಡಿಯಲೇ?
ದಾಮೋದರ ಮಾವಜೋ
ಕೊಂಕಣಿಯ ಮಹತ್ವದ ಲೇಖಕರಾದ ದಾಮೋದರ ಮಾವಜೋ ಅವರ ಹೊಸ ಕಾದಂಬರಿ. ಗೋವಾದ ಬಹುಸಂಸ್ಕೃತಿ ಮಿಶ್ರಣದ ಜೀವನದ ವಿಶಿಷ್ಟ ಒಳನೋಟಗಳನ್ನು ಕೊಡುವ ಕಾದಂಬರಿ. ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಮಾವಜೋ ಈ ಕೃತಿಯಲ್ಲಿ ಹದಿಹರೆಯದವರ ಕಣ್ಣಿನಿಂದ ಜೀವನದ ಹೊಯ್ದಾಟಗಳನ್ನು ಕಂಡಿದ್ದಾರೆ. 2021, ಬೆಲೆ: ರೂ 400
ಅನಾಮದಾಸನ ಕಡತ
ಡಾ. ಹಜಾರೀಪ್ರಸಾದ ದ್ವಿವೇದಿಯವರ ಕಾದಂಬರಿ
ಕನ್ನಡಕ್ಕೆ: ಮ.ಸು. ಕೃಷ್ಣಮೂರ್ತಿ
ಆಧುನಿಕ ಹಿಂದೀ ಸಾಹಿತ್ಯದ ಕೀರ್ತಿಕಲಶಗಳಲ್ಲಿ ಒಬ್ಬರಾದ ಸ್ವ. ಡಾ. ಹಜಾರೀಪ್ರಸಾದ ದ್ವಿವೇದಿಯವರು ಬಹುಮುಖೀ ಪ್ರತಿಭಾಸಂಪನ್ನರು. ಸ್ವಾಧೀನ ಚಿಂತಕರಾಗಿ ಹಿಂದೀ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದರು. ಅವರ ಸುಪ್ರಸಿದ್ಧ ಕಾದಂಬರಿ ಅನಾಮದಾಸನ ಕಡತದಲ್ಲಿ ಉಪನಿಷತ್ಕಾಲೀನ ಜೀವನದ ಈ ಸರಳ ಸುಂದರ ಚಿತ್ರಣದಲ್ಲಿ ಧರ್ಮವಿದೆ, ದರ್ಶನವಿದೆ, ಕಲೆಯಿದೆ.
2021, ಬೆಲೆ ರೂ 450
ಮೋಡದೊಡನೆ ಮಾತುಕತೆ
ಕನ್ನಡ ಭಾವಾನುವಾದ ಅಕ್ಷರ ಕೆ.ವಿ.
ಕಾಳಿದಾಸನ ಮೇಘದೂತವನ್ನು ಆಧಾರವಾಗಿರಿಸಿಕೊಂಡು ನಡೆಸಿರುವ ಈ ಆಲೋಚನಾ ಯಾತ್ರೆಯಲ್ಲಿ ಹಳೆಗಾಲದ ಮತ್ತು ಹೊಸಗಾಲದ ಬೇರೆ ಬೇರೆ ಕಾವ್ಯಗಳು ಸೇರಿಕೊಂಡಿವೆ.
2021, ಬೆಲೆ ರೂ 220
ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್
ಅಬ್ದುಲ್ ರಶೀದ್
ಕನ್ನಡದ ಅಪರೂಪದ ಕತೆಗಾರ ಅಬ್ದುಲ್ ರಶೀದ್ ಅವರ ಹೊಸ ಕತೆಗಳ ಸಂಗ್ರಹ. ಕೊಡಗಿನ ಕಾಫಿತೋಟಗಳಿಂದ ಲಕ್ಷದ್ವೀಪದವರೆಗೆ ಹರಡಿಕೊಂಡ ಈ ಮೋಹಕ ಕತೆಗಳು ರಶೀದರ ಸೃಜನಶೀಲ ಪ್ರತಿಭೆಗೆ ನಿದರ್ಶನಗಳಂತಿವೆ.
2021, ಬೆಲೆ: ರೂ 135
ಇನ್ನು ಅನುವಾದಿತ ಕೃತಿಗಳು ಅಕ್ಷರ ಪ್ರಕಾಶನ ವೆಬ್ಸೈಟ್ನಲ್ಲಿ ಇ-ಬುಕ್ನಲ್ಲಿಯೂ ಲಭ್ಯವಿದೆ.