ಮಲ್ಪೆ, ನ 10 (DaijiworldNews/MS): ಕನ್ನಡ ಚಿತ್ರರಂಗದ ಅದ್ಭುತ ನಟ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 12 ದಿನ. ಅವರ ಅಭಿಮಾನಿಗಳು ಬೇರೆ ಬೇರೆ ಕಡೆ ವಿವಿಧ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ.
ಹಾಗೆಯೆ ಕರಾವಳಿಯಲ್ಲೂ ವಿಶೇಷ ರೀತಿಯಲ್ಲಿ ಅಗಲಿದ ಅಪ್ಪುವಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಉಡುಪಿಯ ಮಲ್ಪೆ ಬೀಚ್ ನಲ್ಲಿ ರೂಬಿಕ್ಸ್ ಕ್ಯೂಬ್ ಬಳಸಿ ವಿನ್ಯಾಸ ಮಾಡಿದ ಪುನೀತ್ ಕಲಾಕೃತಿಯನ್ನು ಬಿಡಿಸಲಾಯಿತು.
ಸುಮಾರು ವರ್ಷಗಳಿಂದ ರೂಬಿಕ್ಸ್ ಕ್ಯೂಬ್ ಬಳಸಿ ಬೇರೆ ಬೇರೆ ಪರಿಕಲ್ಪನೆ ಇಟ್ಟುಕೊಂಡು ಕಲಾಕೃತಿ ಬಿಡಿಸುವ ನೈಪುಣ್ಯತೆ ಪಡೆದ ಮಹೇಶ್ ಮಲ್ಪೆಯ ಕೈ ಚಳಕದಿಂದ ರೂಬಿಕ್ಸ್ ಕ್ಯೂಬ್ ಬಳಸಿ ಮೂಡಿದ ಅಪೂರ್ವ ಕಲಾಕೃತಿ ಯನ್ನು ಮಲ್ಪೆಯ ಬೀಚ್ ತಟದಲ್ಲಿ ನವೆಂಬರ್ 9ರಂದು ಅನಾವರಣಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ರೂಬಿಕ್ಸ್ ಕ್ಯೂಬ್ ವಿನ್ಯಾಸಕಾರ ಮಹೇಶ್ ಮಲ್ಪೆ ಮಾಧ್ಯಮದೊಂದಿಗೆ ಮಾತನಾಡಿ, "ಪುನೀತ್ ಅವರು ನಾಡುಕಂಡ ಅಧ್ಬುತ ಕಲಾವಿದ , ಆದರೆ ಈ ರೀತಿಯಾಗಿ ಆಕಸ್ಮಿಕವಾಗಿ ಅಗಲುವಿಕೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಅಪ್ಪು ಅವರಿಗೆ ಮಲ್ಪೆ ಬೀಚ್ ಗೆ ಭೇಟಿ ಕೊಡುತ್ತಿದ್ದ ಸವಿನೆನಪುಗಳಿವೆ. ತುಂಬಾನೆ ಇಷ್ಟದ ಸ್ಥಳವೆಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸುಮಾರು 704 ರೂಬಿಕ್ಸ್ ಕ್ಯೂಬ್ ಬಳಸಲಾಗಿದ್ದು, ನಾಲ್ಕು ದಿನದಿಂದ ತಯಾರಿ ನಡೆಸಿದ್ದೇನೆ. ಈ ಕ್ಯೂಬ್ ನಲ್ಲಿ ಕೇವಲ ಆರು ಬಣ್ಣಗಳಿವೆ. ಅವರ ಅಭಿಮಾನಿಯಾಗಿ ಈ ರೀತಿಯಾಗಿ ಶ್ರದ್ದಾಂಜಲಿ ಅರ್ಪಿಸುತ್ತೇನೆ ಎಂದು ಭಾವಿಸಿರಲಿಲ್ಲ. ಒಬ್ಬರ ಚಿತ್ರವನ್ನು ನೋಡಿ, ಸರಿಯಾದ ಜಾಗದಲ್ಲಿ ಸೂಕ್ತ ಬಣ್ಣ ಕೊಟ್ಟು ರಚಿಸುವುದು ಒಂದು ಸವಾಲಿನ ಕೆಲಸ ಅವರ ನೆನಪನ್ನು ಮತ್ತಷ್ಟು ಹಸಿರಾಗಿರುವಂತೆ ಮಾಡಲು ರೂಬಿಕ್ಸ್ ಕ್ಯೂಬ್ ವಿನ್ಯಾಸವನ್ನು ಸಮುದ್ರ ತೀರದಲ್ಲಿ ರಚಿಸಿದ್ದೇನೆ" ಎಂದರು.