ಕಾಸರಗೋಡು,ನ 09 (DaijiworldNews/MS): ಪ್ರಯಾಣ ದರ ಏರಿಕೆಗೆ ಒತ್ತಾಯಿಸಿ ನ.೦೯ ರ ಮಂಗಳವಾರ ( ಇಂದಿನಿಂದ) ನಡೆಸಲು ತೀರ್ಮಾನಿಸಿದ್ದ ಖಾಸಗಿ ಬಸ್ಸು ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಸೋಮವಾರ ರಾತ್ರಿ ಸಾರಿಗೆ ಸಚಿವ ಆಂಟನಿ ರಾಜು ಅವರೊಂದಿಗೆ ಖಾಸಗಿ ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ನಡೆಸಿದ ಮಾತುಕತೆ ಯಲ್ಲಿ ಲಭಿಸಿದ ಭರವಸೆ ಹಿನ್ನಲೆಯಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಇಂಧನ ಬೆಲೆ ಏರಿಕೆ ಹಿನ್ನಲೆಯಲ್ಲಿ ಪ್ರಯಾಣ ದರ ಏರಿಕೆ ಮಾಡುವಂತೆ ಒತ್ತಾಯಿಸಿ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು. ಕನಿಷ್ಠ ಪ್ರಯಾಣ ದರವನ್ನು ಹನ್ನೆರಡು ರೂ .ಹಾಗೂ ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಕನಿಷ್ಠ ಆರು ರೂ. ಗೆ ಹೆಚ್ಚಿಸಬೇಕು ಎಂದು ಮಾಲಕರ ಸಂಘ ಒತ್ತಾಯಿಸಿತ್ತು.
ಆದರೆ ನವಂಬರ್ 18 ರ ಮೊದಲು ಬೇಡಿಕೆಗಳ ನ್ನು ಜಾರಿಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದು, ಇದರಿಂದ ಮಾಲಕರು ಮುಷ್ಕರದಿಂದ ಹಿಂದೆ ಸರಿದರು. ಈ ಹಿಂದೆ 2008 ರಲ್ಲಿ ಕನಿಷ್ಠ ದರವನ್ನು ಎಂಟು ರೂ. ಗೆ ಹೆಚ್ಚಿ ಸಲಾಗಿತ್ತು. ಅಂದು ಡೀಸೆಲ್ ಗೆ 66 ರೂ. ಇತ್ತು. ಆ ಬಳಿಕ ಕೊರೋನ ಲಾಕ್ ಡೌನ್ ಬಳಿಕ ಖಾಸಗಿ ಬಸ್ಸುಗಳು ರಸ್ತೆಗಿಳಿದರೂ ಪ್ರಯಾಣಿಕರ ಸಂಖ್ಯೆ ಕಡಿತಗೊಳಿಸಿದ ಹಿನ್ನಲೆಯಲ್ಲಿ ಟಿಕೆಟ್ ದರವನ್ನು 20 ಶೇಕಡಾದಷ್ಟು ಏರಿಕೆ ಮಾಡಲಾಗಿತ್ತು.
ಆದರೆ ಇದೀಗ ಡೀಸೆಲ್ ದರ ಲೀಟರ್ ಗೆ 92 ರೂ. ಗಿಂತ ಅಧಿಕ ಆಗಿದ್ದು, ಇದರಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಮಾಲಕರು ಒತ್ತಾಯಿಸಿದ್ದಾರೆ. ಕನಿಷ್ಠ ಪ್ರಯಾಣ ದರ ವನ್ನು 8 ರೂ . ನಿಂದ 10 ರೂ. ಗೆ ಹೆಚ್ಚಿಸಲು ಹಾಗೂ ಕಿಲೋ ಮೀಟರ್ ದರವನ್ನು ಏರಿಕೆ ಮಾಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನವಂಬರ್18 ರ ಮೊದಲು ಈ ಬಗ್ಗೆ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.