ಕಾರ್ಕಳ, ನ.08 (DaijiworldNews/PY): "ಧರ್ಮ, ಸಂಸ್ಕೃತಿ, ಸಂಸ್ಕಾರದಿಂದ ಮಾನವೀಯತೆ ಮೌಲ್ಯಗಳನ್ನು ಕಾಣಬಹುದು. ಸನಾತನ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದ್ದು, ಶತಶತಮಾನಗಳ ಇತಿಹಾಸವಿದೆ. ವಿಜ್ಞಾನವನ್ನು ಸುಜ್ಞಾನದ ಸಂಪತ್ತನ್ನಾಗಿ ಪರಿವರ್ತಿಸಬೇಕೇ ಹೊರತು ವಿನಾಶದತ್ತ ಕೊಂಡುಹೋಗಬಾರದು. ಸನಾತನದ ತತ್ವ-ಸಿದ್ಧಾಂತಗಳು ವಿಜ್ಞಾನದ ತಳಹದಿಯಲ್ಲಿತ್ತು" ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕಾರ್ಕಳ ಬಸ್ ಏಜೆಂಟರ ಬಳಗವು ವಿಸ್ತೃತ ಬಸ್ ನಿಲ್ದಾಣದಲ್ಲಿ ಆಯೋಜಿಸಿದ 20ನೇ ವಾರ್ಷಿಕೋತ್ಸವದ ದೀಪಾವಳಿ ಸೌಹಾರ್ದ ಸಂಗಮ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಧರ್ಮಗುರುಗಳಾದ ವಂದನೀಯ ಆಲ್ಬರ್ಟ್ ಡಿ ಸೋಜಾ, ಎಸ್ ವೈಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಆಶೀರ್ವಚನದ ಮಾತುಗಳನ್ನಾಡಿ, "ಸೌಹಾರ್ದ ಬದುಕಿನಿಂದ ಸಮಾಜದಿಂದ ಶಾಂತಿ ನೆಲೆಸಲು ಸಾಧ್ಯ. ಮಾನವ ಧರ್ಮ ಶೇಷ್ಠ ಧರ್ಮ" ಎಂದು ವರ್ಣಿಸಿದರು.
ಸಾಹಿತಿ ಮುನಿರಾಜ್ ರೆಂಜಾಳ ಮಾತನಾಡಿ, "ಜೀವಿಗಳೆಲ್ಲವೂ ಹಸಿವಿನಿಂದ ಸಾಯಲ್ಲ. ಮನುಷ್ಯನಿಗೆ ಹೊಟ್ಟೆಯೇ ತುಂಬಲ್ಲ. ಹಾಗಾಗಿ ಆತ ದುಡಿಯುತ್ತಾನೆ. ಹಣ ಸಂಪಾದಿಸುತ್ತಾನೆ. ಸಂಪಾದಿಸುವ ಕುಡಿಹಿಡುವ ಕಲೆ ಇದ್ದರೆ ಅದು ಮನುಷ್ಯನಿಗೆ ಮಾತ್ರ. ಇಂತಹದರಲ್ಲಿ ಕೂಡಿಟ್ಟ ಹಣವನ್ನು ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಸೌಹಾರ್ದಯುವ ಮೆರೆಯುವ ಕಾರ್ಯವನ್ನು ಕಾರ್ಕಳ ಬಸ್ ಏಜೆಂಟರು ಮುಂದಾಗಿರುವುದು ಶ್ಲಾಘನೀಯ" ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಎನ್ನಾ ರೈ, ವಿಶೇಷಚೇತನದ ವಿಶೇಷ ಪ್ರತಿಭೆ ಚಿತ್ರಕಲಾವಿದೆ ಅದಿತಿ ಶೆಟ್ಟಿ, ಹಿರಿಯ ಬಸ್ ಏಜೆಂಟರ ಆದ ಶ್ರೀನಿವಾಸ್ ಶೆಣೈ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ರಾಜ್ಯಪ್ರಶಸ್ತಿ ವಿಜೇತೆ ವಂದನಾ ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯಕ್, ಉದ್ಯಮಿ ಗಣೇಶ್ ಶೆಟ್ಟಿ, ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ವೃಷಭ ರಾಜ್ ಜೈನ್ ಸ್ವಾಗತಿಸಿದರು. ವಸಂತ್ ಎಂ ಧನ್ಯವಾದವಿತ್ತರು. ಇಕ್ಬಾಲ್ ಅಹ್ಮದ್ ನಿರೂಪಿಸಿದರು.