ಮೂಡುಬಿದಿರೆ, ನ.08 (DaijiworldNews/HR): ಮೂಡುಬಿದಿರೆಯ ಶಿರ್ತಾಡಿಯ ಮನೆಯೊಂದರ ತೋಟದಲ್ಲಿ ಮೇಯಲು ಕಟ್ಟಿಹಾಕಿದ್ದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಪುರಸಭೆ ವ್ಯಾಪ್ತಿಯ ಮಾರೂರಿನ ಸತೀಶ್ ಹಾಗೂ ಜಯಾನಂದ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಆರೋಪಿ ಗಿರೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರಿನ ಗಣೇಶ್ ಎಂಬವರ ಮನೆಯ ತೋಟದಲ್ಲಿ ಮೂರು ದಿನಗಳ ಹಿಂದೆ ಮೇಯಲು ಕಟ್ಟಿದ್ದ ದನ ಕಳವಾಗಿತ್ತು. ಶನಿವಾರ ಅದೇ ದನವನ್ನು ಈ ನಾಲ್ವರು ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ ಟೆಂಪೊದಲ್ಲಿ ಕೊಂಡೊಯ್ಯುತ್ತಿರುವುದನ್ನು ಸ್ಥಳೀಯುರು ಗಮನಿಸಿದ್ದು, ಶಿರ್ತಾಡಿ ಸೇತುವೆಯ ಬಳಿ ಟೆಂಪೋವನ್ನು ತಡೆದು ನಿಲ್ಲಿಸಿದ ಸಾರ್ವಜನಿಕರು ವಿಚಾರಿಸಿದಾಗ ಆರೋಪಿಗಳು ಸುಳ್ಳು ಮಾಹಿತಿ ನೀಡಿದ್ದಾರೆ.
ಇನ್ನು ಈ ವೇಳೆ ಅಳಿಯೂರಿನ ಗಣೇಶ್ ಸ್ಥಳಕ್ಕಾಗಮಿಸಿ ಅದು ತಮ್ಮ ಮನೆಯ ಹಸುವೆಂದು ಖಚಿತಪಡಿಸಿದ್ದು, ಬಳಿಕ ಸಾರ್ವಜನಿಕರು ಆರೋಪಿಗಳ ಪೈಕಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.