ಬೆಳ್ತಂಗಡಿ, ನ.07 (DaijiworldNews/PY): ತಾಲೂಕಿನ ಇಳಂತಿಲ ಎಂಬಲ್ಲಿ ತಂತಿ ಬೇಲಿಯ ಬಳಿ ಐದು ಗ್ರೆನೇಡ್ ಪತ್ತೆಯಾಗಿದೆ.
ಈ ಬಗ್ಗೆ ಜಯಕುಮಾರ್ ಪೂಜಾರಿ (66) ಅವರು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಯಕುಮಾರ್ ಅವರು ನ.6ರ ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯಿಂದ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇಳಿಜಾರಿನ ತಂತಿ ಬೇಲಿಯ ಎಡಭಾಗದಲ್ಲಿ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡುಬಂದಿದೆಯೆನ್ನಲಾಗಿದೆ. ಇದರಲ್ಲಿ ಒಂದು ಗ್ರೆನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು, ಉಳಿದ ನಾಲ್ಕು ಗ್ರೆನೇಡ್ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಯಕುಮಾರ್ ಅವರು ಭೂಸೇನಾ ರೆಟಿಮೆಂಟಿನಲ್ಲಿ ಎಸ್ಸಿಒ ಆಗಿ ನಿವೃತ್ತರಾಗಿದ್ದು, ಈ ವಸ್ತುಗಳು ಗ್ರೆನೇಡ್ಗಳೆಂದು ತಿಳಿದುಬಂದಿದೆ. ಈ ಗ್ರೆನೇಡ್ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಜಯಕುಮಾರ್ ಅವರು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಗ್ರೆನೇಡ್ಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಜಯಕುಮಾರ್ ಅವರು ಬರುವ ದಾರಿಯಲ್ಲಿ ಹಾಕಿದ್ದು, ಕೃತ್ಯ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸಿದ್ದಾರೆ.