ಸುಳ್ಯ, ನ.06 (DaijiworldNews/HR): ತಮ್ಮ ತೋಟದಲ್ಲಿ ಅಡಿಕೆ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ 16 ವರ್ಷದ ಬಾಲಕನ ಮೇಲೆ ಹತ್ತು ಮಂದಿ ಯುವಕರ ತಂಡ ಹಲ್ಲೆ ನಡೆಸಿದ್ದು, ಬಾಲಕನಿಗೆ ಥಳಿಸಿದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯ ಪೊಲೀಸರು ಹತ್ತು ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 341, 323, 3 24, 506 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ದಿನೇಶ್, ಈಶ್ವರ ಚಂದ್ರ, ಚೇತನ್ ಒಟ್ಟು 10 ಜನರ ವಿರುದ್ದ ದೂರು ದಾಖಲಾಗಿದೆ.
ಸುಳ್ಯ ತಾಲೂಕಿನ ಗುತ್ತಿಗಾರ್ ಗ್ರಾಮದ ಕಡತಲ್ ಕಜೆ ಎಂಬಲ್ಲಿ ಅಕ್ಟೋಬರ್ 27 ರಂದು ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ನ.2 ರಂದು ವರದಿ ಸಲ್ಲಿಸಿದ್ದು, ಯುವಕರ ತಂಡದ ವಿರುದ್ಧ ಕುವ್ವೆಕೋಡಿ ನಿವಾಸಿ ಸೋಮಪ್ಪ ಗೌಡ ಎಂಬುವವರ ಪುತ್ರ ವೇಣುಗೋಪಾಲ್ ಪಿ.ಎಸ್.(16) ದೂರು ನೀಡಿದ್ದಾರೆ.
ಅಕ್ಟೋಬರ್ 27 ರಂದು ಗುತ್ತಿಗಾರು ಪೇಟೆಗೆ ಅಡಿಕೆ ಮಾರಾಟ ಮಾಡಲು ಗುತ್ತಿಗೆ ಪಡೆದಿದ್ದ ಜಮೀನಿನಿಂದ ಸುಮಾರು 20 ರಿಂದ 25 ಕೆ.ಜಿ ಅಡಿಕೆಯನ್ನು ಒಯ್ಯುತ್ತಿದ್ದಾಗ ಕಡತಲ್ ಕಜೆ ಎಂಬಲ್ಲಿ ತನಗೆ ಪರಿಚಯವಿರುವ ಕೆಲವರು ತಡೆದು ನಿಲ್ಲಿಸಿ ನಾನು ಈಶ್ವರ್ ಎನ್ನುವವರ ತೋಟದಿಂದ ಅಡಿಗೆ ಕದ್ದಿದ್ದೇನೆ ಎಂದು ಯುವಕರ ತಂಡ ನನ್ನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದು, ಪೊಲೀಸ್ ದೂರು ಕೊಟ್ಟರೆ ಕೊಲ್ಲುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.