ಮಂಗಳೂರು, ನ 06 (DaijiworldNews/MS): ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ವಿಚಾರದಲ್ಲಿ ಶಾಸಕ ಯು ಟಿ ಖಾದರ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ನ.11 ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಖಾದರ್, ''ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಸಾಂಸ್ಕೃತಿಕ ಕಲೆಯಾದ ಯಕ್ಷಗಾನ ಮತ್ತು ಭರತನಾಟ್ಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬಂದವರು ಈಗ ಎಲ್ಲಿದ್ದಾರೆ? ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಈ ಭಾಗದವರೇ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ.100 ವಯಸ್ಸಿನ ಬಾಬು ರೈ ಅವರನ್ನು ನೀವು ಏಕೆ ಪರಿಗಣಿಸಿಲ್ಲ. ಇಲ್ಲಿನ ಸಂಸ್ಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ
ಬಿಜೆಪಿ ರಾಜ್ಯ ಸರ್ಕಾರಗಳು ಇಂಧನ ಬೆಲೆ ಇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅಲ್ಪ ಪ್ರಮಾಣದಲ್ಲಿ ಇಳಿಸಿದೆ. ಜನ ಆಕ್ರೋಶದ ದೊಣ್ಣೆಯಿಂದ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಿರಂತರ ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ್ ಗೆ 70 ರೂಪಾಯಿ ತಲುಪಲು 70 ವರ್ಷಗಳೇ ಬೇಕಾಯಿತು. ಆದರೆ ಬಿಜೆಪಿ ಏಳು ವರ್ಷ ತೆಗೆದುಕೊಂಡಿತು.
ಇಂಧನ ಬೆಲೆ ಇಳಿಕೆ ತಮ್ಮ ನಿಯಂತ್ರಣದಲ್ಲಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಬೆಲೆ ಇಳಿಸಿದರು. ಇದು ಆಡಳಿತಾರೂಢ ಬಿಜೆಪಿ ಸರ್ಕಾರದ ಸೋಲು ಮತ್ತು ಶ್ರೀಸಾಮಾನ್ಯನ ಗೆಲುವು. ಗೃಹಬಳಕೆಯ ಅಗತ್ಯ ವಸ್ತುಗಳ ಬೆಲೆ ಇನ್ನೂ ತಗ್ಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆದೇಶ ಹೊರಡಿಸಲಿ. ಅವರು ಕಾರ್ಪೊರೇಟ್ ವಲಯಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ.
ಇದರಿಂದ ಒಂದು ಕೋಟಿಗೂ ಹೆಚ್ಚು ನಷ್ಟವಾಗಿದೆ. ಕಾರ್ಪೊರೇಟ್ ಕಂಪನಿಗಳ ಹೊರೆ ಇಳಿಸುವ ಸಲುವಾಗಿ ಬಿಜೆಪಿ ಸರ್ಕಾರ ಸಾಮಾನ್ಯ ಜನರ ಮೇಲೆ ಹೊರೆ ಹಾಕಿದೆ. ಇಡೀ ಏಷ್ಯಾ ಖಂಡದಲ್ಲಿಯೇ ಪೆಟ್ರೋಲ್ ಬೆಲೆ ಅತಿ ಹೆಚ್ಚು ಎಂಬುದು ಈ ಸರ್ಕಾರದ ಸಾಧನೆ. ಭಾರತಕ್ಕಿಂತ ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆ. ಸರ್ಕಾರ ಪ್ರತಿಭಟನೆ, ಪತ್ರಿಕಾಗೋಷ್ಠಿಗಳಿಗೆ ಕಿವಿಗೊಡಲಿಲ್ಲ. ಈಗ ಸಾರ್ವಜನಿಕರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದಾಗ ಬೆಲೆ ಇಳಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ದಲಿತರಿಗೆ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖಾದರ್, ಈ ವಿಚಾರವಾಗಿ ವಾಗ್ವಾದ ಮಾಡುತ್ತಿರುವವರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರು ಗೋಡ್ಸೆಯ ಭಕ್ತರು. ಅಂಬೇಡ್ಕರ್ ಮಾತ್ರ ಸಂವಿಧಾನ ರಚನೆ ಮಾಡಿಲ್ಲ ಎಂದು ಬಿಜೆಪಿಯವರು ಸಂವಿಧಾನದ ಬಗ್ಗೆ ಮಾತನಾಡುವಾಗ ಈ ಪ್ರತಿಭಟನಾಕಾರರು ಎಲ್ಲಿದ್ದರು? ಈಗ ಅವರು ಬಿಜೆಪಿ ಕಚೇರಿಗೆ ಹೋಗಿ ಈ ಪ್ರಶ್ನೆ ಕೇಳಲಿ.ದಲಿತರಿಗೆ ಮೀಸಲಾತಿ ತಂದವರು ಕಾಂಗ್ರೆಸ್. ನಮ್ಮ ಆಡಳಿತಾವಧಿಯಲ್ಲಿ ದಲಿತರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ದಲಿತರಿಗೆ ನಿವೇಶನ ಮಂಜೂರು ಮಾಡಿದ್ದೇವೆ. ಬಿಜೆಪಿ ಕೊಟ್ಟಿದ್ದೇನು? ಈಗ ಪ್ರತಿಭಟನೆ ನಡೆಸುತ್ತಿರುವ ದಲಿತರು ಬಿಜೆಪಿ ಕಚೇರಿ ಬಳಿ ಬಂದು ಈ ಪ್ರಶ್ನೆ ಕೇಳಲಿ ಎಂದು ಹೇಳಿದ್ದಾರೆ.
ಸುರತ್ಕಲ್ ವೃತ್ತಕ್ಕೆ ವೀರ್ ಸಾವರ್ಕರ್ ಹೆಸರಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಖಾದರ್, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಯಾರೂ ಹೇಳಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ನೂರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಜನರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಅನೇಕ ಜನರು ಜೈಲು ಸೇರಿದ್ದರು. ಆ ಸಮಯದಲ್ಲಿ ಸಾವರ್ಕರ್ ಕೂಡ ಜೈಲಿನಲ್ಲಿದ್ದರು. ತಾನು ಮಾಡಿದ್ದು ತಪ್ಪು ಎಂದು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು ಯಾರು? ವೀರ್ ಸಾವರ್ಕರ್ ಹೆಸರಿನಲ್ಲಿರುವ ವ್ಯತ್ಯಾಸ ಇದು. ಈಗ ನಾವು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ವಿನಾಃ ವೃತ್ತಗಳಿಗೆ ಹೆಸರಿಡುವ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ