ಬ್ರಹ್ಮಾವರ, ನ 06 (DaijiworldNews/MS): ಭತ್ತಕ್ಕೆ ಬೆಂಬಲ ಬೆಲೆ ಹಾಗೂ ಮತ್ತಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜನಪರ ರೈತ ಹೋರಾಟ ಸಮಿತಿ ಮತ್ತು ಇತರ ರೈತ ಸಂಘಟನೆಗಳು ಸೇರಿ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ರ ಮಧ್ಯೆ ಕ್ಷಣಕಾಲ ವಾಹನ ಸಂಚಾರ ಸ್ಥಗಿತ ಗೊಳಿಸಿ ಭತ್ತ ಬಡಿಯುವ ಮೂಲಕ ನ. 06 ರ ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.
ರೈತ ಹೋರಾಟ ಸಮಿತಿ, ಕೋಟದ ಅಧ್ಯಕ್ಷರಾದ ಜಯರಾಮ ಶೆಟ್ಟಿ ಮಾತನಾಡಿ, "ಎರಡು ವರ್ಷದ ಹಿಂದೆ ಸರಕಾರಕ್ಕೆ ಮನವಿ ಕೊಡಲಾಗಿದೆ. ಭತ್ತಕ್ಕೆ ಬೆಂಬಲ ಬೆಲೆ ನವೆಂಬರ್ ಘೋಷಿಸುವಂತೆ ಮನವಿ ಮಾಡಲಾಗಿದೆ. ಆದರೆ ಸರಕಾರ ನಮ್ಮ ಮನವಿಗೆ ಕಿವಿ ಕೊಡಲಿಲ್ಲ. ಈಗ ನಾವು ಹೋರಾಟ ಮಾಡದಿದೆ ಬೇರೆ ವಿಧಿಯೇ ಇಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿವೆ. ಈಗ ಒಂದು ಎಕರೆಗೆ 32000 ಖರ್ಚು ಬರುತ್ತದೆ. ಮಿಲ್ ನಲ್ಲಿ ಸಿಗುವ 16000 ಬೆಲೆ ಯಾವುದಕ್ಕೂ ಸಾಕಾಗುವುದಿಲ್ಲ. 2500 ಬೆಲೆ ನಿಗದಿ ಮಾಡಬೇಕು. ಎಪಿಎಮ್ಸಿ ಕಾನೂನುಗಳನ್ನು ಸಡಿಲ ಮಾಡಬೇಕು. ರೈತರನ್ನು ಒಟ್ಟಾಗಿ ಬೆಲೆ ನಿಗದಿ ಮಾಡಬೇಕು, ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ದಲ್ಲಾಳಿಗಳು ದರ ನಿಗದಿ ಮಾಡ್ತಾರೆ. ಕರಾವಳಿ ಭಾಗದಲ್ಲಿ ತುಂಡು ಭೂಮಿ ಹೆಚ್ಚು, ಮಳೆ ಜಾಸ್ತಿ, ಇಳುವರಿ ಕಡಿಮೆ. ಹಾಗಾಗಿ ಕರಾವಳಿಗೆ ಪ್ರತ್ಯೇಕ ಕೃಷಿ ನೀತಿಯನ್ನು ರೂಪಿಸಬೇಕು. ನಮ್ಮ ಬೇಡಿಕೆಗೆ ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಹಂಗಾರಕಟ್ಟೆ ಬಾಳೆಕುದ್ರು ಮಠದ ನರಸಿಂಹಾಶ್ರಮ ಸ್ವಾಮೀಜಿಯವರು ಮಾತನಾಡಿ, "ರೈತರು ಸ್ವಾರ್ಥವನ್ನು ಇಟ್ಟುಕೊಳ್ಳುವುದಿಲ್ಲ. ಆತ ಪರೋಪಕಾರಿ. ಪ್ರಧಾನಿ ಮೋದಿಯವರು ತರುತ್ತಿರುವ ಯೋಜನೆ ರೈತರಿಗೆ ಪ್ರಯೋಜನಕಾರಿಯಾಗಲಿದೆ. ದಲ್ಲಾಳಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರೈತರನ್ನ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಧ ಸುಪ್ರಸಾದ್ ಶೆಟ್ಟಿ ಮಾತನಾಡಿ, "ಮುಂದಿನ ವರ್ಷ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯುವ ಬಗ್ಗೆ ಭರವಸೆ ನೀಡಿದರು. ಅಲ್ಲಿ ರೈತರ ಬೆಳೆಗೆ ಉತ್ತಮ ಧಾರಣೆ ನೀಡುತ್ತೇವೆ. ರೈತರು ಭತ್ತದ ಜೊತೆಗೆ ಕಬ್ಬುವನ್ನು ಬೆಳಯುವ ಯೋಚನೆ ಮಾಡಬೇಕು. 38000 ಎಕ್ರೆ ವಾರಾಹಿ ನೀರಾವರಿ ಯೋಜನೆ ಪ್ರಾರಂಭವಾಗಿದ್ದು, ಬ್ರಹ್ಮಾವರದ ತಾಲೂಕಿನ ರೈತರಿಗೆ ಕೂಡ ಪ್ರಯೋಜನವಾಗಲಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ರೈತರ ಕೇಂದ್ರ ಆಗಬೇಕು ಎಂದು ಮನವಿ ಮಾಡಿದರು.