ಉಡುಪಿ, ನ. 05 (DaijiworldNews/SM): ಕರಾವಳಿಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಉಡುಪಿಯಲ್ಲಿ ಕ್ರೈಸ್ತ ಕುಟುಂಬವೊಂದು ಗೋ ಪೂಜೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ಕಿದಿಯೂರಿನ ಐರಿನ್ ಅಂದ್ರಾದೆಯವರ ಮನೆಯಲ್ಲಿ ಸ್ಥಳೀಯರ ಜೊತೆಗೂಡಿ ಗೋಪೂಜೆ ನಡೆಸಲಾಗಿದೆ. ಆ ಮೂಲಕ ಸೌಹಾರ್ದ ದೀಪಾವಳಿಯನ್ನು ಆಚರಿಸಲಾಗಿದೆ. ಈ ವೇಳೆ ಮಾತನಾಡಿದ ಅವರು, ಹೆತ್ತ ಮಾತೆ ಮಗುವಿಗೆ ತಾತ್ಕಾಲಿಕ ಹಾಲುಣಿಸಿದರೆ ಗೋಮಾತೆ ಎಲ್ಲರಿಗೂ ಬದುಕಿನುದ್ದಕ್ಕೂ ಹಾಲುಣಿಸುವುದರಿಂದ ಮಾತೆಗೂ ಮಿಗಿಲಾದ ಗೋಮಾತೆಯನ್ನು ಪೂಜಿಸುವ ರಕ್ಷಿಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಶು ಶೆಟ್ಟಿ ಅಂಬಲಪಾಡಿ ಭಾಗವಹಿಸಿ ಅಂದ್ರಾದೆ ಕುಟುಂಬ ಜಾತಿ ಮತ ಮೀರಿ ಸಮಾಜಕ್ಕೆ ಮಾಡುವ ಸಂಸ್ಕಾರಯುತ ಕೆಲಸ ಮಾದರಿ ಎಂದರು. ಸ್ಥಳೀಯರ 4 ಗೋವುಗಳನ್ನು ಅಂದ್ರಾದೆಯವರ ಮನೆಯಲ್ಲಿ ಸಾಮೂಹಿಕವಾಗಿ 30ಕ್ಕೂ ಹೆಚ್ಚು ಗೋ ಭಕ್ತರು ಪೂಜಿಸುವುದರ ಮೂಲಕ ಧನ್ಯರಾದರು. ಗೋಪೂಜೆಯ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.