ಉಡುಪಿ, ನ.05 (DaijiworldNews/PY): ಶ್ರೀಕೃಷ್ಣಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕವಾದ 'ಸಾಮಾಜಿಕ ಸಾಮರಸ್ಯ ವೇದಿಕೆ' ಉಡುಪಿ ಜಿಲ್ಲೆ ಇವರ ಸಂಯೋಜನೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ಸಮಾಜದೊಟ್ಟಿಗೆ ದೀಪಾವಳಿಯ "ತುಡರ್" ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸನಾತನ ಧರ್ಮದ ಉಳಿವು ಅಳಿವಿನ ವಿಚಾರದಲ್ಲಿ ನಾವು ಹೇಗೆ ನಮ್ಮ ಆಚರಣೆಗಳು, ಹಬ್ಬಗಳನ್ನು ತಿಳಿದು ಮಾಡಬೇಕು. ವಿಗ್ರಹವೇ ದೇವರಲ್ಲ, ವಿಗ್ರಹದಲ್ಲಿ ದೇವರನು ಕಾಣಬೇಕು ಮತ್ತು ವೃತಗಳನ್ನು ಶಾಸ್ತ್ರವಿಹಿತವಾಗಿ ತಿಳಿದು ಮಾಡಿದರೆ ಉತ್ತಮ" ಎಂದು ಧರ್ಮಾಚರಣೆಗಳ ಬಗ್ಗೆ ತಿಳಿ ಹೇಳಿ ಅನುಗ್ರಹಿಸಿದರು.
ನಂತರ ಸುಮಾರು 50 ಕುಟುಂಬಗಳಿಗೆ ಕೃಷ್ಣದೇವರ ಭಾವಚಿತ್ರ, ತುಳಸೀಮಾಲೆ, ನೀಲಾಂಜನ, ಹಣತೆ, ಎಣ್ಣೆ ಸಹಿತವಾಗಿ ಮಂತ್ರಾಕ್ಷತೆ ನೀಡಿ ಕೃಷ್ಣ ಸನ್ನಿಧಿಯ ದೀಪವನ್ನು ಅವರವರ ಮನೆಗಳಲ್ಲಿ ಬೆಳಗಲು ನೀಡಿದರು.
ಮಂಗಳೂರು ವಿಭಾಗದ ಕಾರ್ಯವಾಹ ವಾದಿರಾಜರು ಪ್ರಸ್ತಾವನೆ ಮಾಡಿ, ಉಡುಪಿ ಪ್ರಮುಖ ರವಿ ಅಲೆವೂರು ಕಾರ್ಯಕ್ರಮ ನಿರ್ವಹಿಸಿದರು.