ಉಡುಪಿ, ನ.05 (DaijiworldNews/PY): ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣ ಮತ್ತು ಇಥೆನಾಲ ಘಟಕದ ಯೋಜನೆಗೆ ಪೂರಕವಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಬ್ಬು ಬೆಳೆಯಲು ಕೇಂದ್ರ ಸರಕಾರ ಕಬ್ಬು ಅಭಿವೃದ್ಧಿಗೆ ಶೀಘ್ರ 10 ಕೆೋಟಿ ಅನುದಾನ ನೀಡುವಂತೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ನೀಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, "ರೈತರ ಆರ್ಥಿಕ ಪ್ರಗತಿ ಆಗಲೂ ಕಬ್ಬು ಬೆಳೆಯನ್ನು ಬೆಳೆಸಬೇಕು ಅದಕ್ಕಾಗಿ ಕೇಂದ್ರ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧವಿದೆ" ಎಂದು ಭರವಸೆ ನೀಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಇಥೆನಾಲ್ ತಯಾರಿಕಾ ಘಟಕ ಪ್ರಾರಂಭಿಸಲು ಕೇಂದ್ರ ಸರಕಾರ ಶೀಘ್ರದಲ್ಲೇ ಪ್ರಾರಂಭಿಕ ಮಂಜೂರಾತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಕಾರ್ಖಾನೆಯ ಆವರಣದಲ್ಲಿ ಆಹಾರ ಸಂಸ್ಕರಣಾ ಘಟಕ, ವೇರ್ ಹೌಸ್, ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಕೇಂದ್ರ ಸರಕಾರ ವಿಶೇಷ ಪ್ರೋತ್ಸಾಹ ನೀಡಲಾಗುವುದು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ ಚಂದ್ರಶೆಟ್ಟಿ, ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಬಿಜೆಪಿ ನಾಯಕರಾದ ಕೆ ಉದಯಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕಾರ್ಖಾನೆಯ ಉಪಾಧ್ಯಕ್ಷ ಉಮಾನಾಥ ಶೆಟ್ಟಿ ನಿರ್ದೇಶಕ ಸಂತೋಷ್ ಶೆಟ್ಟಿ ಬಲಾಡಿ, ಆಸ್ತಿಕ ಶಾಸ್ತ್ರಿ, ರೈತ ಮೋರ್ಚದ ಪ್ರವೀಣ್ ಗುರ್ಮೆ, ಭಾಕಿಸಂನ ಸತ್ಯನಾರಾಯಣ ಉಡುಪ, ಕೃಷಿಕ ಸಮಾಜದ ಶೇಡಿಕೊಡ್ಲು ವಿಠಲ ಶೆಟ್ಟಿ ವಿವಿಧ ರೈತ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾಕಿಸಂ ,ರೈತ ಸಂಘ, ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.