ಬಂಟ್ವಾಳ, ನ. 04 (DaijiworldNews/SM): ಕೇಂದ್ರ ಹಾಗೂ ರಾಜ್ಯ ಸರಕಾರ ನ.3 ರಂದು ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿತ ಮಾಡಿ ಅದೇಶ ನೀಡಿದ್ದರೂ ಬಿ.ಸಿ.ರೋಡ್ ನ ಪೆಟ್ರೋಲ್ ಪಂಪ್ ಗಳಲ್ಲಿ ಇಂದು ಸಂಜೆಯೂ ರಾಜ್ಯ ಸರಕಾರದ ದರ ಕಡಿತ ಅನ್ವಯ ವಾಗಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಸೇರಿದಂತೆ ಇತರ ಕೆಲವು ಭಾಗಗಳಲ್ಲಿ ಸಂಜೆ 6 ಗಂಟೆಯ ಬಳಿಕವೇ ರಾಜ್ಯ ಸರಕಾರದ 7 ರೂಪಾಯಿ ದರ ಕಡಿತ ಅನ್ವಯವಾಗಿತ್ತು. ಅಂದರೆ ಮಂಗಳೂರಿನಲ್ಲಿ, ಇಂದು ಸಂಜೆ ಲೀಟರ್ ಗೆ 99.76 ರೂಪಾಯಿಯಾಗಿದೆ. ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 84.24 ರೂ ಇದೆ. ಆದರೆ ಬಿಸಿರೋಡಿನಲ್ಲಿ ಸಂಜೆ 6. ಗಂಟೆ ಬಳಿಕವೂ ಪೆಟ್ರೋಲ್ ಗೆ 106.92 ಹಾಗೂ ಡಿಸೇಲ್ ಗೆ 91.34 ರೂಪಾಯಿಗೆ ಮಾರಾಟ ವಾಗುತ್ತಿತ್ತು.
ದರ ಇಳಿಕೆಯಾಗದ ಹಿನ್ನೆಲೆಯಲ್ಲಿ ವಾಹನ ಸವಾರರು ಗರಂ ಆಗಿದ್ದರು. ಬಿಸಿರೋಡು ಕರ್ನಾಟಕ ರಾಜ್ಯದಲ್ಲಿ ಇಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಪಂಪ್ ಗಳಲ್ಲಿ ಪ್ರಶ್ನಿಸಿದರು. ಪಂಪ್ ಗಳಲ್ಲಿ ಗೊಂದಲವುಂಟಾಯಿತು. ರಾಜ್ಯದಲ್ಲಿ ಪೆಟ್ರೋಲ್ ದರ ಇಳಿಕೆಯಾದ ಬಳಿಕವೂ ಬಿಸಿರೋಡಿನಲ್ಲಿ ದರ ಕಡಿತ ಮಾಡದೇ ಹಗಲು ದರೋಡೆ ಮಾಡುವ ಪಂಪ್ ಗಳ ವಿರುದ್ಧ ಗ್ರಾಹಕರು ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಆದರೆ ರಾಜ್ಯ ಸರಕಾರದ ದರ ಕಡಿತ ಇನ್ನೂ ಕೂಡ ಎಲ್ಲಿಯೂ ಅನ್ವಯವಾಗಿಲ್ಲ ಎಂದು ಇಲ್ಲಿನ ಪೆಟ್ರೋಲ್ ಬಂಕ್ ನವರು ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು.