ಕಾರ್ಕಳ, ನ.04 (DaijiworldNews/PY): ಭಾಷೆ, ಸಂಸ್ಕೃತಿ, ಕಲೆಗಳನ್ನು ಪ್ರತಿಯೊಬ್ಬ ಕನ್ನಡಿಗನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಚಿತ್ರನಟ ಅರವಿಂದ ಬೋಳಾರ್ ಹೇಳಿದರು.
ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ನಲ್ಲಿ ಏರ್ಪಡಿಸಲಾದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
"ಕನ್ನಡ ರಾಜೋತ್ಸವವನ್ನು ವ್ಯಾಪಾರ ಮಳಿಗೆಗಳಲ್ಲಿ ಆಚರಿಸುವ ಮೂಲಕ ಹೊಸ ಮೆರುಗನ್ನು ಪೂರ್ಣಿಮಾ ಸಿಲ್ಕ್ಸ್ ನೀಡಿರುವುದು ಶ್ಲಾಘನೀಯ. ಘೋಷಣೆಯು ಕಾರ್ಯರೂಪಕ್ಕೆ ಬಂದಾಗ ಅದರಿಂದ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿತ್ತದೆ" ಎಂದು ಅಭಿಮತ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ರವೀಂದ್ರ ಕುಮಾರ್ ಮಾತನಾಡಿ, ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ಅವರ ಅಶಯದಂತೆ ಕರ್ನಾಟಕ ರಾಜ್ಯದಲ್ಲಿಯೇ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದ ರವಿಪ್ರಕಾಶ್ ಪ್ರಭು ದಂಪತಿಯವರನ್ನು ಅಭಿನಂದಿಸಿದರು.
ಕಾರ್ಕಳದ ಶಿರ್ಡಿ ಸಾಯಿಬಾಬಾ ದೇವಸ್ಥಾನದ ಧರ್ಮದರ್ಶಿ ಶಿರ್ಡಿ ಸಾಯಿ ಕಾಲೇಜಿನ ಸಂಸ್ಥಾಪಕ ಚಂದ್ರಹಾಸ ಸುವರ್ಣ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಜ್ಯೋತಿ ಸುನೀಲ್ ಕುಮಾರ್ ಶೆಟ್ಟಿ, ಉದ್ಯಮಿ ವಿಠಲ ಶೆಟ್ಟಿ ಶುಭ ಹಾರೈಸಿದರು.
ಪೂರ್ಣಿಮಾ ಸಿಲ್ಕ್ಸ್ ಮಾಲಕ ರವಿಪ್ರಕಾಶ್ ಪ್ರಭು ಸ್ವಾಗತಿಸಿ, ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಿದರು.
ಆನೆಕೆರೆಯ ಅಂಬಾಭವಾನಿ ತಂಡದವರಿಂದ ಕನ್ನಡ ಹಾಡುಗಳು, ಕುಮಾರಿ ವೈಷ್ಣವಿ ಮತ್ತು ಕುಮಾರಿ ಪ್ರಜ್ಞಾ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಆರ್. ವರದರಾಯ ಪ್ರಭು ನಿರೂಪಿಸಿದರು.