ಮಂಗಳೂರು, ನ 04 (DaijiworldNews/MS):ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವೂ ಹೆಚ್ಚು ಸ್ಥಾನ ಗಳಿಸಿದೆ. ಬೆಲೆ ಏರಿಕೆ ತತ್ತರಿಸಿರುವ ಜನವೂ ಪ್ರಸ್ತುತ ಸರ್ಕಾರದ ವೈಫಲ್ಯಗಳಿಂದ ತುಂಬಿದ ಆಡಳಿತದ ವೈಖರಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ್ ರೈ ಬುಧವಾರ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ನ.೦೩ ರ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮಾನಾಥ ರೈ, " ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ. ಅಲ್ಲಿ ಪ್ರತಿ ಮನೆಗೆ 10 ಸಾವಿರ ರೂ. ಹಂಚಿದರೂ ಸೋತರು. ಅಲ್ಲದೇ ಸಿಂದಗಿಯಲ್ಲೂ ಹಣ ಹಂಚಿದ್ದು, ಆಡಳಿತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಾ ಕಾವೂಂಗ ನಾ ಕಾನೇ ದೂಂಗ ಎಂದು ತಿಂದಿದ್ದಾರೆ.ಈಗ ಅವರೆಲ್ಲರೂ ಸೇರಿ ಮನೆ ಮನೆ ಹಣ ಹಂಚಿದ್ದಾರೆ.ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಎಂದು ಕೆಲವರು ಅಪಹಾಸ್ಯ ಮಾಡಿದ್ದರು.ಯಾರನ್ನು ಯಾರು ಮುಕ್ತಾ ಮಾಡುವುದು ಜನ ತೀರ್ಮಾನ ಮಾಡುತ್ತಾರೆಯೇ ವಿನಃ ಪಕ್ಷಗಳು ಅಲ್ಲ. ಎಂದು ಹೇಳಿದರು.
ಜನಸಾಮಾನ್ಯರಿಗೆ ಬದುಕಲಾಗದಂತೆ ಬೆಲೆ ಏರಿಕೆಯಾಗುತ್ತಿದ್ದು ಇದನ್ನು ಸಚಿವರ ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ. ಕೊರೊನಾ ಸಾಂಕ್ರಮಿಕಕ್ಕೂ, ಬೆಲೆ ಏರಿಕೆಗೂ ಸಂಬಂಧಕಲ್ಪಿಸಿ ಮಾತನಾಡುತ್ತಿರುವುದು ಅರ್ಥಹೀನ. ಜನರ ಸಮಸ್ಯೆಗಳನ್ನು ಮುಚ್ಚಿಟ್ಟು ರಾಜಕೀಯ ವಿಚಾರಗಳನ್ನು ಮುಂದಿಟ್ಟರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.