ಮಂಗಳೂರು, ನ.03 (DaijiworldNews/PY): ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ಮಹಿಳೆಯ ಮೇಲೆ ನಡೆದಿದ್ದ ಹಲ್ಲೆ , ಮಾನಹಾನಿ ಪ್ರಕರಣದ ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು 2 ವರ್ಷ ಜೈಲು ಶಿಕ್ಷೆ ಹಾಗೂ 2,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಶಿಕ್ಷೆಗೊಳಗಾದವರನ್ನು ನೌಶಾದ್, ಅಬೂಬಕರ್ ಹಾಗೂ ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಮಹಿಳೆಯೋರ್ವರಿಗೆ ನೌಶಾದ್ ಕಿರುಕುಳ ನೀಡುತ್ತಿದ್ದ. ಈ ಕುರಿತು ಸಂತ್ರಸ್ತೆಯ ಪತಿ ಪ್ರಶ್ನಿಸಿದಾಗ, ನೌಶಾದ್ ಆತ ತಂದೆ ಅಬೂಬಕರ್ ಹಾಗೂ ಬಾವ ಮೊಹಮ್ಮದ್ ಹನೀಫ್ ಎಂಬವರನ್ನು ಕರೆದುಕೊಂಡು ಮಹಿಳೆಯ ಮನೆಯಂಗಳಕ್ಕೆ ಬಂದು ಮಹಿಳೆಯ ಪತಿಗೆ ಕಲ್ಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯ 14 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅಪರಾಧ ದೃಢಪಟ್ಟಿರುವುದಾಗಿ ತೀರ್ಪು ಪ್ರಕಟಿಸಿದೆ. ದಂಡದ ಮೊತ್ತದಲ್ಲಿ ಮಹಿಳೆಯ ಗಾಯಾಳು ಪತಿಗೆ 3,000 ರೂ., ಮಹಿಳೆಗೆ 3,000 ರೂ. ಪರಿಹಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಇಬ್ಬರಿಗೂ ಸೂಕ್ತ ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.