ಮಂಗಳೂರು, ನ. 02 (DaijiworldNews/SM): ಮೋರ್ಗನ್ಸ್ ಗೇಟ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್ ಪ್ರಭುಗೆ ಷರತ್ತು ಬದ್ಧ ಜಾಮೀನು ಮಂಜೂರುಗೊಂಡಿದೆ.
ಮಂಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರುಗೊಂಡಿದೆ. ನ್ಯಾಯಾಧೀಶರಾದ ಅಭಯ್ ಧನ್ ಪಾಲ್ ಚೌಗಾಲ ಅವರು ತೀರ್ಪು ಘೋಷಿಸಿದ್ದು, ವಕೀಲರಾದ ವೈ ವಿಕ್ರಂ ಹೆಗ್ಡೆ, ನರಸಿಂಹ ಹೆಗ್ಡೆ ಆರೋಪಿ ರಾಜೇಶ್ ಪರ ವಾದಿಸಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಆರೋಪಿಯಿಂದ ಐದು ಲಕ್ಷ ರೂ. ಬಾಂಡ್ ಪಡೆದು, ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿದೆ ಹಾಗೂ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಅಕ್ಟೋಬರ್ 5ರಂದು ಶೂಟೌಟ್ ಪ್ರಕರಣ ನಡೆದಿತ್ತು. ಸಿಬ್ಬಂದಿಗಳಿಬ್ಬರು ವೇತನ ವಿಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ ಅವರ ಕಚೇರಿಯಲ್ಲಿ ಘರ್ಷಣೆ ನಡೆದಿತ್ತು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿತ್ತು. ಈ ವೇಳೆ ರಾಜೇಶ್ ಅವರ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.