ಮಂಗಳೂರು, ನ. 02 (DaijiworldNews/HR): ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಹೃದ್ರೋಗ ತಜ್ಞರ ಬಳಿ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕುರಿತು ಕೇಳಿ ಬರುತ್ತಿರುವ ಕೆಲವೊಂದು ಹೇಳಿಕೆ, ಸಲಹೆಗಳು ಜನಸಾಮಾನ್ಯರಲ್ಲಿ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಬೇಕಿರುವುದು ಆತಂಕವಲ್ಲ. ಬದಲಿಗೆ ಆರೋಗ್ಯದ ಕುರಿತಂತೆ ಎಚ್ಚರಿಕೆಯ ಹೆಜ್ಜೆ ಎಂದು ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಹೃದ್ರೋಗ ಸಂಬಂಧಿ ರೋಗಗಳು, ನಿಯಂತ್ರಣ, ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, "ಕಳೆದ ನಾಲ್ಕೈದು ತಿಂಗಳಿನಿಂದೀಚೆಗೆ ಹೃದ್ರೋಗದ ಸಂಬಂಧಿಸಿದ ವಿಚಾರಗಳು ಹೆಚ್ಚು ಮುನ್ನೆಲೆಗೆ ಬಂದಿವೆ. ನಟ ಸಿದ್ಧಾರ್ಥ್ ಶುಕ್ಲಾ, ಕಳೆದ ಶ್ರುವಾರ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಹಠಾತ್ ಸಾವು ಜನರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಒತ್ತಡವನ್ನು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ವೈದ್ಯರಾದವರು ಹೃದಯ ಸಂಬಂಧಿ ಕಾಯಿಲೆಗಳನ್ನು ತಿಳಿದುಕೊಳ್ಳುವ ಅಥವಾ ನಿಯಂತ್ರಣ, ಜಾಗೃತಿ ಕುರಿತಂತೆ ಅಂತಾರಾಷ್ಟ್ರೀಯ ಮಾರ್ಗಸೂಚಿಗಳಂತೆ ವೈಜ್ಞಾನಿಕ ವಿಚಾರಗಳನ್ನು ಮುಂದಿಡಬೇಕಾದ ಅಗತ್ಯವಿದೆ" ಎಂದರು.
40 ವರ್ಷ ಮೇಲ್ಪಟ್ಟವರಲ್ಲಿ ಹೃದಯ ರೋಗಗಳು ಸಾಮಾನ್ಯ. ಅದಕ್ಕಾಗಿ ಎಲ್ಲರಿಗೂ ಆ್ಯಂಜಿಯೋಗ್ರಾಮ್ ಅಗತ್ಯವೆಂಬುದು ಸರಿಯಲ್ಲ. ಆದರೆ ಸಾಮಾನ್ಯವಾಗಿ ಹೃದಯ ರೋಗದ ಕೌಟುಂಬಿಕ ಹಿನ್ನೆಲೆ ಇದ್ದಲ್ಲಿ (ತಮ್ಮ ತಂದೆ ತಾಯಿಗೆ45 ವರ್ಷದ ಒಳಗೆ ಹೃದಾಯಾಘಾತ, ಹೃದಯ ಸ್ತಂಭನ ಆಗಿದ್ದಲ್ಲಿ) ಹೃದಯದ ತಪಾಸಣೆ ನಡೆಸುವುದು ಅಗತ್ಯವಾಗಿದೆ. ಉಳಿದಂತೆ ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ಇದರ ಜತೆಯಲ್ಲೇ ಕೊಲೆಸ್ಟ್ರಾಲ್, ರಕ್ತದೊತ್ತಡದ ಬಗ್ಗೆಯೂ ನಿಯಮಿತ ತಪಾಸಣೆ ಎಲ್ಲರಿಗೂ ಅಗತ್ಯವಾಗಿರುತ್ತದೆ. ಹೃದಯಕ್ಕೆ ಸಂಬಂಧಿಸಿ ಸುರಕ್ಷಿತ ತಪಾಸಣೆ ನಡೆಸುವ ಮೂಲಕ ಮುಂಜಾಗೃತಾ ಕ್ರಮಗಳನ್ನು ವಹಿಸಬಹುದಾಗಿದೆ. ಬಹುತೇಕವಾಗಿ ಹೃದಯ ಸಂಬಂಧಿ ಕಾಯಿಲೆಗಳು ಮೇಲ್ನೋಟಕ್ಕೆ ಕಂಡು ಬಾರದಿದ್ದರೂ ಇಕೋ, ಇಕೋ ಕಾರ್ಡಿಯೋಗ್ರಫಿ, ಆಂಜಿಯೋಗ್ರಾಮ್ ಮೊದಲಾದ ತಪಾಸಣೆಯ ಸಂದರ್ಭ ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಹೃದಯ ಸಂಬಂಧಿ ಅನಾರೋಗ್ಯಗಳನ್ನು ತಡೆಯಲು ಸಾಧ್ಯ ಎಂದು ಅವರು ಹೇಳಿದರು.
ಜಿಮ್ ಅಥವಾ ವ್ಯಾಯಾಮ ದೇಹಕ್ಕೆ ಸರಿಯಲ್ಲ ಎಂಬುದು ತಪ್ಪು. ಆದರೆ ಸರಿಯಾದ ರೀತಿಯಲ್ಲಿ ಸಮತೋಲಿತ ವ್ಯಾಯಾಮ ದೇಹಕ್ಕೆ ಅಗತ್ಯವಾಗಿರುತ್ತದೆ. ದೇಹವನ್ನು ಜಡವಾಗಿಸುವುದು ಅಥವಾ ಅತಿಯಾದ ವ್ಯಾಯಾಮ ದೇಹಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ವಯೋಮಿತಿಗೆ ತಕ್ಕುದಾದ ಸಮತೋಲಿತ ವ್ಯಾಯಾಮವನ್ನು ರೂಢಿಸಿಕೊಳ್ಳುವುದರಿಂದ ರೋಗಗಳಿಂದ ದೂರವಿರಬಹುದು ಎಂದಿದ್ದಾರೆ.
ದೇಹ, ಹೃದಯದ ಆರೋಗ್ಯದಲ್ಲಿ ನಿಯಮಿತ ವ್ಯಾಯಾಮದ ಜತೆಗೆ ಆಹಾರ ಹಾಗೂ ಜೀವನ ಶೈಲಿಯೂ ಪ್ರಮುಖ ಕಾರಣವಾಗಿರುತ್ತದೆ. ಕನಿಷ್ಠ ಆರು ಗಂಟೆಯ ಸುಖ ನಿದ್ರೆಯ ಬಳಿಕ ಆಹಾರ ರಹಿತವಾಗಿ ಸೂಕ್ತ ಪ್ರಮಾಣದ ನೀರು ಸೇವನೆಯೊಂದಿಗೆ ನಡೆಸುವ ವ್ಯಾಯಾಮ ದೇಹಕ್ಕೆ ಅನುಕೂಲ ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು.