ಮಂಗಳೂರು, ನ 02 (DaijiworldNews/MS): ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ, ದರೋಡೆ, ದ್ವಿಚಕ್ರವಾಹನಗಳ ಕಳವು ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ 24 ಪ್ರಕರಣಗಳಲ್ಲಿ ಬೇಕಾಗಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರನ್ನು ಕಾವೂರು ನಿವಾಸಿ ಅಬ್ದುಲ್ ಇಶಾಮ್ (26), ಪಂಜಿಮೊಗರು ನಿವಾಸಿ ಸಫ್ವಾನ್ (29), ಕಾವೂರಿನ ಮಹಮ್ಮದ್ ತೌಸಿಫ್ (30), ಶಾಂತಿನಗರದ ಅಬ್ದುಲ್ ಖಾದರ್ ಸಿನಾನ್ (30), ಮಲ್ಲೂರಿನ ಮಹಮ್ಮದ್ ಫಜಲ್ (32), ಚೊಕ್ಕಬೆಟ್ಟುವಿನ ಅರ್ಷದ್ (42) . ಮತ್ತು ಕುಂದಾಪುರದ ಕುಂಬಾಶಿಯ ಮೊಹಮ್ಮದ್ ರೆಹಮಾನ್ (23)ಎಂದು ಗುರುತಿಸಲಾಗಿದೆ.
ಇವರಿಂದ 10 ಲಕ್ಷ ಮೌಲ್ಯದ 210 ಗ್ರಾಂ ಚಿನ್ನದ ಸರ, ಮಂಗಳಸೂತ್ರ ಹಾಗೂ 2 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ವಿವಿಧೆಡೆ ಕಳವು ಮಾಡಲಾಗಿರುವ ಚಿನ್ನಾಭರಣ ಹಾಗೂ 5ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲು ಬಾಕಿ ಇದೆ.
ಬಜ್ಪೆ, ಮಂಗಳೂರು ಉತ್ತರ, ಬರ್ಕೆ, ಕಾವೂರು, ಉರ್ವ, ಮಂಗಳೂರು ಪೂರ್ವ, ಮಂಗಳೂರು ಟೌನ್ ಮತ್ತು ಉಳ್ಳಾಲ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ, ಸರಗಳ್ಳತನ, ಬೈಕ್ ಕಳ್ಳತನ, ದರೋಡೆ ಪ್ರಕರಣ, ಪೊಲೀಸ್ ಹಲ್ಲೆ ಸೇರಿದಂತೆ 24 ಪ್ರಕರಣಗಳಲ್ಲಿ ಈ ತಂಡ ಪೊಲೀಸರಿಗೆ ಬೇಕಾಗಿದ್ದರು.
ಅಬ್ದುಲ್ ಇಶಾಮ್ ವಿರುದ್ಧ 9 ಪ್ರಕರಣ, ಅಬ್ದುಲ್ ಖಾದರ್ ಎರಡು ಪ್ರಕರಣ, ಮಹಮ್ಮದ್ ತೌಸಿಫ್ ಒಂದು ಪ್ರಕರಣ, ಮೊಹಮ್ಮದ್ ಫಜಲ್ ವಿರುದ್ಧ 3 ಪ್ರಕರಣಗಳಿವೆ.