ಕಾರ್ಕಳ, ನ.01(DaijiworldNews/HR): ಶಿಕ್ಷಣವು ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯುವ ಮಾಧ್ಯಮ, ಸಾಧನೆ ಮಾಡಿದವರಷ್ಟೇ ಸಾಧಕರಲ್ಲ, ಪ್ರತಿಯೊಂದು ಮಗುವೂ ಸಾಧಕ, ನಾವು ಈ ಸಮಾಜಕ್ಕೆ ನಮ್ಮ ಗರಿಷ್ಠ ಕೊಡುಗೆ ಕೊಡಲು ಶ್ರಮಿಸಬೇಕು ಎಂದು ಮಿಯ್ಯಾರು ಪಲ್ಲೊಟ್ಟಿ ವಿಕಾಸ್ನ ಧರ್ಮಗುರು ಪೌಲ್ ಕುಟಿನ್ಹಾ ಹೇಳಿದರು.
ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, "ಭಾಷೆ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಇದ್ದಾಗ ಭಾಷೆ ಬೆಳೆಯುತ್ತದೆ. ಕನ್ನಡ ಭಾಷೆ ಕನ್ನಡ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಇದು ಅತ್ಯಂತ ಸೊಗಸಾದ ಭಾಷೆ. ಯುವಜನತೆ ಕನಿಷ್ಟ ಎರಡು-ಮೂರು ಭಾಷೆಗಳಲ್ಲಿ ಪರಿಣತಿ ಸಾಧಿಸಬೇಕು" ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯಕ್, ಜೆಸಿಐ ಅಧ್ಯಕ್ಷ ಸಂತೋಷ್ ರೆಂಜಾಳ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವಿಜ್ಞಾನ ಉಪನ್ಯಾಸಕರು ಸಿದ್ಧಗೊಳಿಸಿದ ಸಿ.ಇ.ಟಿ ಮತ್ತು ನೀಟ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
2020-21ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿಜ್ಞಾನ ವಿಭಾಗದ ತುಷಾರ್, ಸ್ವೀಡಲ್ ಪಿಂಟೋ, ಲಿಶಾ ಲೋಬೋ, ದ್ವಿತೀಯ ಸ್ಥಾನ ಪಡೆದ ಕೀರ್ತನಾ ಹೆಬ್ಬಾರ್, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅನುಶ್ರೀ, ದ್ವಿತೀಯ ಸ್ಥಾನ ಪಡೆದ ಪ್ರಿಸ್ಟನ್ ಕ್ಯಾಸ್ಟಲಿನೋ, ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರೀಶಲ್ ಡಿಅಲ್ಮೇಡಾ ದ್ವಿತೀಯ ಸ್ಥಾನ ಪಡೆದ ಜನನಿ ಶೆಟ್ಟಿ ಅವರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಪ್ರಸ್ತಾವನೆಗೈದರು. ಪ್ರೌಢಶಾಲಾ ಮುಖ್ಯಶಿಕ್ಷಕರಾದ ಪ್ರೌಢಶಾಲಾ ವಿಭಾಗದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮೇರಿಯನ್ ಡಿಸೋಜ, ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲರಾದ ಡಾ. ಪ್ರಕಾಶ್ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರುಗಳಾದ ಪದವಿಪೂರ್ವ ವಿಭಾಗದ ಜೆರಾಲ್ಡ್ ಡಿಸಿಲ್ವಾ, ಪ್ರೌಢಶಾಲಾ ವಿಭಾಗದ ಶಿಲ್ಪ ಪ್ರಶಾಂತ್, ಪ್ರಾಥಮಿಕ ವಿಭಾಗದ ಕವಿತಾ ಪಾಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖ್ ಮೊಹಮ್ಮದ್ ಅಲ್ತಾಫ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.