ಉಡುಪಿ, ನ.01(DaijiworldNews/HR): ಪುನೀತ್ ರಾಜಕುಮಾರ್ ನಿಧನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ.ರಾಜ್ಯೋತ್ಸವ ಕೊಡಬೇಕು ಎಂಬ ಮಾತು ಎಲ್ಲಾ ಕಡೆಗಳಿಂದ ಕೇಳಿಬಂದಿದ್ದು, ನಿಯಮಾವಳಿ ಮತ್ತು ಕೋರ್ಟ್ ಆದೇಶದ ಪ್ರಕಾರ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ. ಹಾಗಾಗಿ ಈ ಬೇಡಿಕೆ ಪರಿಗಣಿಸಲು ಸಾಧ್ಯವಾಗಿಲ್ಲ. ಅವರಿಗೆ ವಿಶೇಷ ಗೌರವ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ" ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಸೇವೆಯನ್ನ ಪರಿಗಣಿಸುತ್ತೇವೆ. ಯಾವ ರೀತಿಯ ಗೌರವ ಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ.ಈಗಲೇ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀಪಾವಳಿ ನಂತರ ಸಭೆ ನಡೆಸಿ ಗೌರವ ಸಲ್ಲಿಕೆ ಬಗ್ಗೆ ತೀರ್ಮಾನ ಮಾಡಲಿದ್ದೇವೆ" ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡಕ್ಕೆ ಮಾರಕ ಎಂದು ಖಂಡಿಸಿ ಸಿಎಫ್ಐ ಸಂಘಟನೆಯಿಂದ ಕರಾಳ ದಿನಾಚರಣೆ ಆಚರಿಸುವ ಕುರಿತು ಮಾತನಾಡಿದ ಅವರು, "ಯಾರೋ ಅಲ್ಪಬುದ್ಧಿ ಇರುವವರು ಈ ರೀತಿಯ ಮಾತುಗಳನ್ನಾಡುತ್ತಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ನಮ್ಮ ಭಾಷೆಗೆ ವಿಶೇಷ ಆದ್ಯತೆ ಕೊಟ್ಟಿದೆ" ಎಂದಿದ್ದಾರೆ.
ಇನ್ನು ಅರ್ಧಂಬರ್ಧ ತಿಳಿದುಕೊಂಡವರು ಬೇರೆಬೇರೆ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ಸಿಗಲಿದ್ದು, ಪೂರ್ಣವಾದ ವಿವರ ನೋಡಿ ಮಾತನಾಡುವ ಒಳ್ಳೆಯದು" ಎಂದು ಹೇಳಿದ್ದಾರೆ.