ಉಡುಪಿ, ನ.01 (DaijiworldNews/PY): "ನಾಡಗೀತೆ ಬಗ್ಗೆ ನಾವು ಬಹಳ ಸ್ಪಷ್ಟ ಇದ್ದೇವೆ. ಇವತ್ತು ಅಥವಾ ನಾಳೆಯೊಳಗೆ ನಾಡಗೀತೆಯ ಅಂತಿಮರೂಪ ಪ್ರಕಟಿಸುತ್ತೇವೆ" ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 66ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಡಗೀತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾಡಗೀತೆ ಬಗ್ಗೆ ನಾವು ಬಹಳ ಸ್ಪಷ್ಟ ಇದ್ದೇವೆ. ರಾಗ ಸಂಯೋಜನೆ ಹಾಗೂ ಕಾಲಮಿತಿ ನಿರ್ಧರಿಸಲು ಸಮಿತಿ ರಚನೆ ಮಾಡಿದ್ದೆವು. ಈ ಸಮಿತಿ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇವತ್ತು ಅಥವಾ ನಾಳೆಯೊಳಗೆ ನಾಡಗೀತೆಯ ಅಂತಿಮರೂಪ ಪ್ರಕಟಿಸುತ್ತೇವೆ" ಎಂದಿದ್ದಾರೆ.
"ಕರ್ನಾಟಕದಲ್ಲಿ ನಡೆಯುತ್ತಿರುವ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು. ನಮ್ಮ ಸರ್ಕಾರ ಕನ್ನಡಿಗರಿಗೆ ಆದ್ಯತೆಯನ್ನು ಕೊಟ್ಟೇ ಕೊಡುತ್ತದೆ. ಕನ್ನಡಿಗರಿಗೆ ನಿರ್ದಿಷ್ಟ ಮೀಸಲಾತಿ ಸಿಗಬೇಕು ಎನ್ನುವುದು ಸರ್ಕಾರದ ಆಗ್ರಹ. ಕಾನೂನು ತೊಡಕುಗಳನ್ನು ನಿವಾರಿಸಿ ಸೂಕ್ತವಾದ ಬದಲಾವಣೆ ಮಾಡುತ್ತೇವೆ. ಕನ್ನಡಿಗರಿಗೆ ಉದ್ಯೋಗ ಸಿಗಲು ಸರ್ಕಾರ ಹೆಜ್ಜೆ ಇಡಲಿದೆ" ಎಂದು ತಿಳಿಸಿದ್ದಾರೆ.
ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾಳೆ ಬಿಜೆಪಿ ಪರವಾದ ಫಲಿತಾಂಶ ಬರುತ್ತದೆ. ಈ ಚುನಾವಣೆಯಲ್ಲಿ ಸ್ವತಃ ನಾನು ಕೆಲಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರವಾದ ಒಲವು ವ್ಯಕ್ತವಾಗಿದೆ. ನಾಳಿನ ಫಲಿತಾಂಶ ಕಾಂಗ್ರೆಸ್ಸಿಗೆ ನಿರಾಶಾದಾಯಕವಾಗಿದೆ. ನಿಶ್ಚಿತವಾಗಿ ಬಿಜೆಪಿ ಪರವಾದ ಫಲಿತಾಂಶ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸೋಲೊಪ್ಪಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಮುಂಬರುವ ಜಿ.ಪಂ., ತಾ.ಪಂ. ವಿಧಾನಪರಿಷತ್ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ" ಎಂದಿದ್ದಾರೆ.
"ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸುಗಮ ಸಂಗೀತ ಕ್ಷೇತ್ರ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲರಿಗೆ ನ್ಯಾಯ ಕೊಡಲು ಆಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಸೀಮಿತವಾದ ಅವಕಾಶದಲ್ಲಿ 66 ಮಂದಿಯನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗಿಲ್ಲ ಎನ್ನುವುದನ್ನು ವಿಶ್ವಾಸದಿಂದ ಹೇಳಬಲ್ಲೆ. ಈ ಬಾರಿ ಪ್ರಶಸ್ತಿ, ಪುರಸ್ಕೃತರನ್ನು ಹುಡುಕಿಕೊಂಡು ಬಂದಿದೆ. ಒಂದೇ ಬಾರಿ ಎಲ್ಲರನ್ನೂ ಆಯ್ಕೆ ಮಾಡುವುದು ಕಷ್ಟಸಾಧ್ಯ. ಮುಂದಿನ ವರ್ಷ ಇನ್ನಷ್ಟು ಒಳ್ಳೆಯ ಸಾಧಕರನ್ನು ಗುರುತಿಸುತ್ತೇವೆ. ಸಣ್ಣಪುಟ್ಟ ನಿಯಮಾವಳಿಗಳ ಬದಲಾವಣೆಯಾಗಬೇಕು ಅನ್ನಿಸುತ್ತಿದೆ. ಸಿಎಂ ಬಳಿ ಚರ್ಚಿಸಿ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವಕ್ಕೆ ಏಕರೂಪ ನಿಯಮಾವಳಿ ಬಗ್ಗೆ ತಮ್ಮ ಇಂಗಿತ ವ್ಯಕ್ತಪಡಿಸಿದ ಸಚಿವರು, "ಕೆಲವು ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಸಂಖ್ಯೆಯೂ ಕೂಡಾ ನಿರ್ದಿಷ್ಟವಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಎಷ್ಟನೇ ರಾಜ್ಯೋತ್ಸವ ಅಷ್ಟೇ ಪ್ರಶಸ್ತಿ ನೀಡುತ್ತಿದ್ದೇವೆ. ಜಿಲ್ಲೆಗಳಲ್ಲೂ ಕೂಡಾ ಪ್ರಶಸ್ತಿಗೆ ಮಾನದಂಡ ರೂಪಿಸುತ್ತೇವೆ. ಎಲ್ಲಾ ಜಿಲ್ಲೆಗಳಿಗೂ ಏಕರೂಪದ ನಿಯಮಾವಳಿ ರೂಪಿಸುವ ಚಿಂತನೆ ಇದೆ. ಏಕರೂಪದ ನಿಯಮಾವಳಿಗೆ ಮುಂದಿನ ದಿನಗಳಲ್ಲಿ ಸುತ್ತೋಲೆ ತರುತ್ತೇವೆ" ಎಂದು ಹೇಳಿದ್ದಾರೆ.