ಕಾರ್ಕಳ, ಅ.31 (DaijiworldNews/PY): ರಿಪೇರಿಗೆಂದು ಗ್ಯಾರೇಜಿನಲ್ಲಿ ನಿಲ್ಲಿಸಿದ ಟಿಪ್ಪರ್ನಿಂದಲೇ ಬ್ಯಾಟರಿ ಕಳವುಗೈದ ಘಟನೆ ನಡೆದಿದೆ.
ದೂರುದಾರ ಕೆ ಶಶಿಕಾಂತ್ ಹೆಬ್ಬಾರ್ ಅವರ ಎಫ್ಸಿಸಿ ಮಾಲೀಕತ್ವದ ಕಾರ್ಕಳ ಆನೆಕೆರೆ ಭವಾನಿ ಮಿಲ್ ಬಳಿ ಬಾಟಾ ಶೋ ರೂಂ ಮುಂಭಾಗದ ಕೆಬಿಟಿ ಟ್ರಕ್ ಸರ್ವಿಸ್ ಎಂಬ ಗ್ಯಾರೇಜಿನಲ್ಲಿ ಅ.13 ರಂದು ರಾತ್ರಿ 9.00 ಗಂಟೆಗೆ ಗ್ಯಾರೇಜ್ಗೆ ಬಾಗಿಲು ಹಾಕಿ ಮನೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ 8:30 ಗಂಟೆಗೆ ಗ್ಯಾರೇಜ್ಗೆ ಬಂದಿದ್ದು ಬಳಿಕ ಗ್ಯಾರೇಜ್ನ ಮುಂಭಾಗದ ಸ್ಥಳದಲ್ಲಿ ರಿಪೇರಿಗೆ ನಿಲ್ಲಿಸಿದ್ದ 2 ಟಿಪ್ಪರ್ ಲಾರಿಗಳನ್ನು ಪರಿಶೀಲಿಸಿದಾಗ ಎರಡು ಟಿಪ್ಪರ್ ಲಾರಿಗಳಿಗೆ ಅಳವಡಿಸಿದ ಒಟ್ಟು 20,000 ರೂ. ಮೌಲ್ಯದ ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಶಶಿಕಾಂತ್ ಹೆಬ್ಬಾರ್ ಅವರು ಟಿಪ್ಪರ್ ಲಾರಿ ಮಾಲಕ ಗಣೇಶ್ ಶೆಟ್ಟಿ ಅವರಿಗೆ ಮಾಹಿತಿ ತಿಳಿಸಿದ್ದು, ಬಳಿಕ ಇಬ್ಬರೂ ಕಳವಾದ ಬ್ಯಾಟರಿಯನ್ನು ಹುಡುಕಾಡಿದರೂ ಬ್ಯಾಟರಿ ಪತ್ತೆಯಾಗಿಲ್ಲ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.