ಕುಂದಾಪುರ, ಅ. 30(DaijiworldNews/HR): ತೀರಾ ಬಡವರಿಗೆ ತುರ್ತು ಮೂಲಭೂತ ಅವಶ್ಯಕತೆ ಕಲ್ಪಿಸುವಾಗ ಅನುದಾನದ ಕೊರತೆ ಇದ್ದರೆ ಘಟನೋತ್ತರ ಮಂಜೂರಾತಿ ನೀಡುವ ಮೂಲಕ ಅವಕಾಶ ನೀಡಬಹುದು. ಪ.ಜಾ. ಪ.ಪಂಗಡದ ಕುಟುಂಬಗಳಿಗೆ ಕೆಲವೊಂದು ಸಂದರ್ಭದಲ್ಲಿ ಮೀಸರಿಸಿದ ಅನುದಾನದ ಕೊರತೆಯಿಂದಾಗಿ ಮನೆ ದುರಸ್ತಿ ಇತ್ಯಾದಿ ಆಗಲೇಬೇಕಾದ ಕೆಲಸಗಳು ಹಿನ್ನೆಡೆಯಾಗಬಾರದು. ಅಂತಹ ಕುಟುಂಬಗಳು ಇದ್ದರೆ ಪ್ರಥಮ ಪ್ರಾಶಸ್ತ್ಯದಲ್ಲಿಯೇ ಅವರಿಗೆ ಅವಕಾಶ ಮಾಡಿಕೊಡಿ ಎಂದು ಪುರಸಭಾ ಸದಸ್ಯ ಮೋಹನದಾಸ ಶೆಣೈ ಹೇಳಿದರು.
ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪ್ರಾಯೋಗಿಕವಾಗಿ ಮಾರ್ಕ್ಗಳನ್ನು ಮಾಡಿ ನಿಗಧಿತ ಮಾರ್ಕ್ ಒಳಗಡೆ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಇದರ ಪರಿಣಾಮವನ್ನು ಗಮನಿಸಿ ಮುಂದಿನ ಹೆಜ್ಜೆ ಇಡಬೇಕು ಎಂದರು.
ವನಿತಾ ಎಸ್ ಬಿಲ್ಲವ ಮಾತನಾಡಿ, "ಮೆಸ್ಕಾಂ ಸಮೀಪ ಕೊರಗ ದೇವಾಡಿಗ ಮನೆ ಹತ್ತಿರ ವಿದ್ಯುತ್ ಕಂಬ ಹಾಕಲಾಗಿದೆ. ಸಂಪರ್ಕ ನೀಡಿಲ್ಲ" ಎಂದು ದೂರಿದರು.
ಚಂದ್ರಶೇಖರ ಖಾರ್ವಿ ಮಾತನಾಡಿ, "ಪುರಸಭೆಯ ಎಲ್ಲಾ ಸದಸ್ಯರಿಗೂ ಅನುಕೂಲವಾಗುವಂತೆ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕಾರ್ಯಾಗಾರ ಮಾಡಬೇಕು" ಎಂದು ಸಲಹೆ ನೀಡಿದರು.
ಕಳೆದ ಸಭೆಯಲ್ಲಿ ಗೂಡಂಗಡಿ ವಿಷಯಕ್ಕೆ ಸಂಬಂಧಿಸಿ ಮಾಡಿದ ನಿರ್ಣಯ ಅಪೂರ್ಣವಾಗಿದ್ದು ತಿದ್ದುಪಡಿ ಮಾಡುವಂತೆ ಚಂದ್ರಶೇಖರ್ ಖಾರ್ವಿ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಒಟ್ಟು ವಿಷಯವನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ನಿರ್ಣಯ ಕ್ರಮ ಬದ್ಧವಾಗಿದೆ ಎಂದರು. ಅದನ್ನು ಒಪ್ಪದ ಚಂದ್ರಶೇಖರ್ ಖಾರ್ವಿ ಹಿಂದಿನ ಸಭೆಯಲ್ಲಿ ಓದಿ ಹೇಳಿದ ವಾಕ್ಯಗಳು ನಿರ್ಣಯದಲ್ಲಿ ಉಲ್ಲೇಖವಾಗಿಲ್ಲ. ಅದನ್ನು ಉಲ್ಲೇಖಿಸಬೇಕು ಎಂದು ಹಠ ಹಿಡಿದರು. ಆಗ ಮೋಹನದಾಸ ಶೆಣೈ ಮಾತನಾಡಿ, ಆಡುಭಾಷೆಗಳಲ್ಲಿ ರಸ್ತೆಗಳನ್ನು ಪಿಡಬ್ಲ್ಯೀಡಿ ರಸ್ತೆ ಎಂದು ಹೇಳುವುದು ಸಾಮಾನ್ಯ. ಆ ಹಿನ್ನೆಲೆಯಲ್ಲಿ ಶಾಸಕರು ಹೇಳಿರಬಹುದು. ಪುರಸಭಾ ವ್ಯಾಪ್ತಿಯ ರಸ್ತೆಗಳನ್ನು ಪುರಸಭೆಯೇ ಅಭಿವೃದ್ದಿ ಪಡಿಸುವಂತೆ ಸರ್ಕಾರ ಆದೇಶಿಸಿದೆ. ಆ ಬಳಿಕ ಪುರಸಭೆ ವತಿಯಿಂದ ಅಭಿವೃದ್ದಿ ಮಾಡಲಾಗಿದೆ ನೀಡಿದರು.
ಕೋವಿಡ್ ಕಾರಣದಿಂದ ತೆರಿಗೆ ವಸೂಲಾತಿಗೆ ಒತ್ತಡ ಹಾಕಲಿಲ್ಲ. ಈಗ ನಿಧಾನವಾಗಿ ವ್ಯವಸ್ಥೆ ಸರಿಯಾಗುತ್ತಿದ್ದು ಫೆಬ್ರವರಿ ಒಳಗೆ 85-90% ತೆರಿಗೆ ವಸೂಲಾತಿ ಮಾಡಲಾಗುವುದು. ಕುಂದಾಪುರದ ಜನ ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.
ಕೋವಿಡ್-19 ಕಾರಣದಿಂದ ಮೀನುಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರು ನಾಲ್ಕು ತಿಂಗಳಿಂದ ಏನೂ ವ್ಯಾಪಾರವಿಲ್ಲದೇ ಅತಂತ್ರರಾಗಿದ್ದರು. ಶುಲ್ಕದಲ್ಲಿ ಅವರಿಗೆ ರಿಯಾಯತಿ ನೀಡಬೇಕು ಎಂದು ರಾಘವೇಂದ್ರ ಖಾರ್ವಿ ಹೇಳಿದರು.
ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಅಧಿಕಾರಿಗಳು ಉಪಸ್ಥಿತರಿದ್ದರು.