ಬಂಟ್ವಾಳ, ಅ. 30(DaijiworldNews/HR): ತಾಲೂಕಿನಲ್ಲಿರುವ ಡಿ.ಸಿ.ಮನ್ನಾ ಜಮೀನನ್ನು ಗುರುತಿಸಿ ಅದರಲ್ಲಿ ಅತಿಕ್ರಮಣ ಮತ್ತು ಉಳಿಕೆಯ ಸಂಪೂರ್ಣ ವಿವರವಾದ ವರದಿಯನ್ನು ಸಲ್ಲಿಸುವಂತೆ ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರಿಗೆ ಸೂಚಿಸಿದರು.
ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಟ್ವಾಳತಾಲೂಕು ಮಟ್ಟದ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನ ನೀಡಿದರು. ಇದಕ್ಕು ಮೊದಲು ತಾಲೂಕಿನಲ್ಲಿ ಡಿ.ಸಿ.ಮನ್ನಾ ಜಮೀನನ್ನು ಅತಿಕ್ರಮಣಗೊಳಿಸಿರುವುದು,ಇನ್ನು ಕೂಡ ಆರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದಿರುವ ಬಗ್ಗೆ ಸಬೆಯಲ್ಲಿ ಪ.ಜಾ.ಮತ್ತು ಪಂಗಡ ಸಮಾಜದ ಮುಖಂಡರು ಗಮನಸೆಳೆದು ಚರ್ಚಿಸಿದರು.
ಈ ಹಂತದಲ್ಲಿ ಡಿ.ಸಿ.ಮನ್ನಾ ಜಮೀನಿನಲ್ಲಿ ಶಾಲೆ,ಸರಕಾರಿ ಕಟ್ಟಡ ನಿರ್ಮಿಸಿರುವುದನ್ನು ತೆರವುಗೊಳಿಸಲು ಸಾಧ್ಯವಿಲ್ಲದ ಮಾತು,ಜಿಲ್ಲಾಧಿಕಾರಿಯವರು ಈಗಾಗಲೇ ನೀಡಿರುವ ನಿರ್ದೇಶನದಂತೆ ಲಭ್ಯ ಜಮೀನಿನಲ್ಲಿ ಎರಡುಮುಕ್ಕಾಲಿನಂತೆ ಸೈಟ್ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಎ.ಸಿ.ಮದನ್ ಮೋಹನ್ ಸಭೆಗೆ ತಿಳಿಸಿದರು.
ಇದನ್ನು ಬಲವಾಗಿ ಆಕ್ಷೇಪಿಸಿದ ದಲಿತ ಮುಖಂಡ ಜನಾರ್ದನ ಬೋಳಂತೂರು, ಜನಾರ್ದನ ಚಂಡ್ತಿಮಾರ್, ಕೇಶವ ನಾಯ್ಕ್ ಅವರು ಈ ಹಿಂದಿನ ಜಿಲ್ಲಾಧಿಕಾರಿಯವರು ಮಾಡಿರುವ ಆದೇಶವನ್ನು ಜಾರಿಗೊಳಿಸಬೇಕು, ಒತ್ತುವರಿಯಾಗಿರುವ ಜಮೀನಿಗೆ ಪರ್ಯಾಯ ಸರಕಾರಿ ಜಮೀನನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಪುರಸಭಾ ವ್ಯಾಪ್ತಿಯಲ್ಲಿ ಡಿ.ಸಿ.ಮನ್ನಾ ಜಮೀನು ಎಷ್ಠಿದೆ ಎಂದು ಮಾಹಿತಿ ನೀಡುವಂತೆ ಗಂಗಾಧರ ಪರಾರಿ ಅವರು ಪ್ರಶ್ನಿಸಿದರು. ಕೊನೆಗೆ ಬಂಟ್ವಾಳ ತಾ.ನಲ್ಲಿ ಲಭ್ಯವಿರುವ ಡಿ.ಸಿ.ಮನ್ನಾ ಜಮೀನನ್ನು ಗುರುತಿಸಿ ಅತಿಕ್ರಮಣ ಮತ್ತು ಉಳಿಕಯೆ ಸಂಪೂರ್ಣ ವರದಿ ಸಲ್ಲಿಸುವಂತೆ ಎ.ಸಿ.ಯವರು ತಹಶೀಲ್ದಾರ್ ರಶ್ಮೀ ಅವರಿಗೆ ಸೂಚಿಸಿದರು.
ಸರಪಾಡಿ ಗ್ರಾಮದಲ್ಲಿ ಪ.ಜಾತಿಗೆ ಕಾದಿರಿಸಲಾದ ಸ್ಮಶಾನ ಭೂಮಿಯನ್ನು ವ್ಯಕ್ತಿಯೋರ್ವರು ಅತಿಕ್ರಮಣಗೊಳಿಸಿದ್ದಾರೆ ಎಂದು ಸ್ಥಳೀಯರೋರ್ವರು ಸಭೆಯ ಗಮನಕ್ಕೆ ತಂದರು.ಈ ಬಗ್ಗೆ ಪರಿಶೀಲನೆಗೆ ಸೂಚಿಸಲಾಯಿತು.
ಅರಳಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2013 ರಿಂದ ಮನವಿ ಸಲ್ಲಿಸುತ್ತಾ ಬರಲಾಗುತ್ತಿದೆ ಎಂದರೆ,ಇಲ್ಲಿನ ನವಗ್ರಾಮದಲ್ಲು ಸೂಕ್ತ ಜಮೀನಿದ್ದು,ಇಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಮತ್ತೋರ್ವ ಮುಖಂಡ ಸಭೆಯಲ್ಲಿ ತಿಳಿಸಿದರು. ಅರಳ ಗ್ರಾಮದಲ್ಲಿ ಎಲ್ಲರಿಗೂ ಅನುಕಾಲವಾಗುವಂತೆ ಸೂಕ್ತವಾದ ಸರಕಾರಿ ಜಮೀನು ತೋರಿಸಿಕೊಟ್ಟಲ್ಲಿ ತಕ್ಷಣ ಆ ಜಮೀನನ್ನು ಮಂಜೂರು ಮಾಡುವುದಾಗಿ ಎ.ಸಿ.ಮದನ್ ಮೋಹನ್ ಭರವಸೆ ನೀಡಿದರು.ಮಂಗಳವಾರವೇ ಜಮೀನು ಪರಿಶೀಲಿಸಿ ಕ್ರಮಕೈಗೊಳ್ಳಲು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಬಂಟ್ವಾಳ ತಾಲೂಕಿನಲ್ಲಿ ಸರ್ವೇಯರ್ ಕೊರತೆಯಿಂದ ರಸ್ತೆ,ಭೂನ್ಯಾಯ ಸಹಿತ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸರ್ವೇಕಾರ್ಯಕ್ಕೆ ತೊಂದರೆಯಾಗುತ್ತಿದೆ. ಜನಸಾಮಾನ್ಯರು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಭೆಯ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಮಿಷನರ್ ಮದನ್ ಮೋಹನ್ ಅವರು ಈ ವಿಚಾರ ನನ್ನ ಗಮನಕ್ಕು ಬಂದಿದ್ದು, ಬಂಟ್ವಾಳಕ್ಕೆ ಹೆಚ್ಚುವರಿಯಾಗಿ ಒರ್ವ ತಾಲೂಕು ಸರ್ವೇಯರ್ ಅಗತ್ಯವಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಎಡಿಎಲ್ ಆರ್ ಗೆ ಸೂಚಿಸಿದರು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರೊಂದಿಗು ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆಯಿತ್ತರು.
ಸಭೆಯಲ್ಲಿ ಸಾರಿಗೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ವಿಶ್ವನಾಥ ಚಂಡ್ತಿಮಾರ್ ಸಭೆಯ ಗಮನಕ್ಕೆ ತಂದರು.ಅವರಿಗೆ ನೋಟೀಸ್ ಜಾರಿ ಮಾಡುವಂತೆ ಸಮಾಜ ಕಲ್ಯಾಣಾಧಿಕಾರಿಯವರಿಗೆ ಸೂಚಿಸಿದರು.ಇದಾದ ಕೆಲವೇ ಹೊತ್ತಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿ ಚರಣ್ ಸಭೆಗೆ ಹಾಜರಾದರು.ಆಗ ಬ್ಯಾಡ್ಜ್ ಇಲ್ಲದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಚಾಲಕರಿಗೆ ಸಾಲ ನೀಡಲಾಗುತ್ತಿಲ್ಲ ಈ ಬಗ್ಗೆ ಮಾಹಿತಿ ನೀಡುವಂತೆ ಸಾರಿಗೆ ಅಧಿಕಾರಿಯವರಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಅಧಿಕಾರಿ ಚರಣ್ ಚಾಲನ ಪರವಾನಿಗೆ ಪಡೆದು ಒಂದು ವರ್ಷ ಕಳೆದರೆ,ವಯಸ್ಸು 20 ಪೂರ್ಣಗೊಂಡಿದ್ದರೆ ಅವರಿಗೆ ಬ್ಯಾಡ್ಜ್ ನೀಡಲಾಗುತ್ತದೆ.ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರೆ,ಬ್ಯಾಡ್ಜ್ ಇದ್ದವರಿಗೆ ಸಾಲ ವಿತರಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಸ್ಪಷ್ಟಪಡಿಸಿದರು.