ಕಾರ್ಕಳ, ಅ. 30(DaijiworldNews/HR): ಜಮೀನಿನಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿ, ಹಣ ಲಪಟಾಯಿಸಿದ ಚಿತ್ರದುರ್ಗಾ ಮೂಲದ ಇಬ್ಬರನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಕ್ಕಂದೂರು ದೇವಸ್ಥಾನ ಬಳಿಯ ನಿವಾಸಿ ಕೃಷ್ಣ ನಾಯ್ಕ ಎಂಬವರ ಮನೆಗೆ ಕೆಲ ದಿನಗಳ ಹಿಂದೆ ಬಂದಿದ್ದ ಚಿತ್ರದುರ್ಗದ ಕನಹಳ್ಳಿ ವಾಸಿಗಳಾದ ಓಬಯ್ಯ ಮತ್ತು ಅಜೇಯ ಎಂಬ ಇಬ್ಬರು ಜಮೀನಿನಲ್ಲಿ ನಿಧಿ ಇರುವುದಾಗಿ ಹೇಳಿ ಅದಕ್ಕೆ ಪೂಜೆ ಹೋಮಗಳನ್ನು ಮಾಡಲು 1ಲಕ್ಷ ರೂ. ಖರ್ಚಾಗುತ್ತದೆ ಆಗುತ್ತದೆ ಎಂದು ಹೇಳಿ 95 ಸಾವಿರ ರೂ. ಪಡೆದು ತೆರಳಿದ್ದರು. ಉಳಿದ ಹಣವನ್ನು ಅ.30ರಂದು ತೆಗೆದುಕೊಂಡು ಹೋಗಲು ಕಾರಿನಲ್ಲಿ ಬಂದಿದ್ದು ಉಳಿದ ರೂಪಾಯಿ 5 ಸಾವಿರ ಪಡೆದು, ಜಮೀನಿನ ಒಂದು ಮೂಲೆಯಲ್ಲಿ ಗುಂಡಿ ತೋಡಿ ಅದರಿಂದ ಒಂದು ದೇವರ ಮುಖವಾಡ ಮತ್ತು ಹಿತ್ತಾಳೆಯ ಶಂಖವನ್ನು ತೆಗೆದು ಕೃಷ್ಣ ನಾಯ್ಕ ರವರಿಗೆ ಕೊಟ್ಟು ದೇವರ ಕೋಣೆಯಲ್ಲಿ ಇಡಿ ಎಂದು ಹೇಳಿ ಬಂದ ಕಾರಿನಲ್ಲಿ ಪರಾರಿಯಾಗುವ ಯತ್ನ ನಡೆಸಿದ್ದರು.
ಇನ್ನು ಅವರಿಬ್ಬರ ನಡವಳಿಕೆಯಿಂದ ಸಂಶಯಗೊಂಡ ಕೃಷ್ಣ ನಾಯ್ಕ ರವರ ಮಗ ಕಾರ್ಕಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕಾರ್ಕಳ ನಗರ ಠಾಣಾ ಎಸ್ಐ ಮಧು ಬಿ ಇ ರವರು ಸಿಬಂದಿಗಳೊಂದಿಗೆ ಆರೋಪಿಗಳು ಬಂದಿರುವ ಕಾರಿನ ಮಾಹಿತಿ ಪಡೆದು ಹುಡುಕಾಡಿದಾಗ ಕಾರು ಮೂಜೂರು ಚಿಕ್ಕಲ್ ಬೆಟ್ಟು ಎಂಬಲ್ಲಿ ಪತ್ತೆಯಾಗಿದೆ. ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಕೃಷ್ಣ ನಾಯ್ಕ ರವರಿಗೆ ನಿಧಿ ಇದೆ ಎಂದು ನಂಬಿಸಿ ಅವರಿಂದ ರೂಪಾಯಿ 1ಲಕ್ಷ ಹಣವನ್ನು ಪಡೆದು ವಂಚಿಸಿರುವುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಹಲವು ಕಡೆ ಜನರಿಗೆ ಮೋಸ ಮಾಡಿರುವ ಬಗ್ಗೆ ಸಂಶಯವಿದ್ದು ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.