Karavali
ಬಂಟ್ವಾಳ: 'ಪ್ರಧಾನಿ ಮೋದಿಯಿಂದ ದೇಶ ಸರ್ವಾಗೀಣ ಅಭಿವೃದ್ಧಿಯತ್ತ' - ಸಚಿವ ಭಗವಂತ ಖೂಬಾ
- Sat, Oct 30 2021 06:00:06 PM
-
ಬಂಟ್ವಾಳ, ಅ.30 (DaijiworldNews/PY): "ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಬಳಿಕ ದೇಶ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದ್ದು, ದೇಶದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾ ಆತ್ಮನಿರ್ಭರರಾಗುತ್ತಿದ್ದಾರೆ" ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಆಜಾದಿ ಕಾ ಸುವರ್ಣ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್ಗಳು, ನಬಾರ್ಡ್ ಮತ್ತು ಇತರೆ ಸಹಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಂಟವಾಳದ ಬಂಟರ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಾಲಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಹಿಂದಿನ ಸರ್ಕಾರಗಳು ನಾಗರೀಕರ ಅವಶ್ಯಕತೆಗಳನ್ನು ಗುರುತಿಸುವಲ್ಲಿ, ಜನರ ಸಹಭಾಗಿತ್ವ ಪಡೆಯುವಲ್ಲಿ ವಿಫಲವಾದ್ದರಿಂದ ಬ್ಯಾಂಕಿಂಗ್ ಕ್ಷೇತ್ರ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ ಅಲ್ಲದೆ ಕಾಂಗ್ರೆಸ್ನವರು ಜಾತಿ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ದಲಿತರನ್ನು ಮುಖ್ಯವಾಹಿನಿಗೆ ಬರಲು ಅವಕಾಶ ನೀಡಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜದಲ್ಲಿ ಯೋಜನೆಗಳಿಂದ ವಂಚಿತರಾದವರಿಗೆ ಯಾವುದೇ ತಾರತಮ್ಯ ಮಾಡದೆ ನೆರವು ನೀಡಿದೆ" ಎಂದರು.
"ದೇಶದಲ್ಲಿ 12 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಲಾಗಿದ್ದರೆ, ಸುಮಾರು 16 ಕೋಟಿ ರೈತರು ಯೋಜನೆಗಳ ಲಾಭ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 195606 ಮಂದಿ ಮುದ್ರಾ ಯೋಜನೆ ಲಾಭ ಪಡೆದಿದ್ದು. ಬೀದಿ ವ್ಯಾಪಾರಿಗಳ ಸಹಿತ ಹಲವರಿಗೆ ಸಾಲ, ಸೌಲಭ್ಯಗಳು ದೊರಕಿವೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ" ಎಂದರು.
"ಅಭಿವೃದ್ಧಿ ಕೇವಲ ಮೂಲಭೂತ ಸೌಕರ್ಯಗಳಿಂದ ಮಾತ್ರ ಸಾಧ್ಯವಿಲ್ಲ, ಜೊತೆಗೆ ಶಿಕ್ಷಣದ ಏಳಿಗೆ, ಆರ್ಥಿಕ ಏಳಿಗೆ ಮತ್ತು ಸಾಮಾಜಿಕ ಏಳಿಗೆಯೂ ಅಗತ್ಯವಾದುದು, ಆಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ, ಇದು ದೂರದೃಷ್ಟಿಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕಾರ್ಯರೂಪಕ್ಕೆ ಬರುತ್ತಿದೆ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, "ಸಾಮಾಜಿಕ ಕ್ಷೇತ್ರದಲ್ಲಿ ಟೀಕೆ,ಟಿಪ್ಪಣಿಗಳು ಸಹಜ,ಇವನ್ನೆಲ್ಲ ಮೆಟ್ಟಿ ನಿಂತು ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯಲ್ಲಿ ನಾವು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ" ಎಂದರು.
ತುಳು,ಕನ್ನಡ ಬಲ್ಲವರು ಕಡ್ಡಾಯವಿರಬೇಕು:
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಸಾಲಮೇಳ ಮೂಲಕ ಈ ಜಿಲ್ಲೆಯ ಜನರು ಬ್ಯಾಂಕಿಗೆ ಹೋಗಿ ಸಾಲ ಪಡೆಯಬಹುದು ಎಂದು ನಿರೂಪಿಸಿದವರು ಜನಾರ್ದನ ಪೂಜಾರಿ. ಡಿಜಿಟಲ್ ಇಂಡಿಯಾ, ಜನಧನ್ ಅಕೌಂಟ್ ಮೂಲಕ ನೇರವಾಗಿ ಫಲಾನುಭವಿಗೆ ದೊರಕುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದರು" ಎಂದರು."ದ. ಕ. ಜಿಲ್ಲೆಯಲ್ಲಿ 4 ಲಕ್ಷ ಜನರಲ್ಲಿ ಜನ್ ಧನ್ ಅಕೌಂಟ್ ಆಗಿದೆ. ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೂ ಮಾಡಲಾಗುತ್ತಿದೆ. ಹೀಗಾಗಿ ಸ್ಥಳೀಯ ಭಾಷೆ ಬಲ್ಲವರು ಪ್ರತಿಯೊಂದು ಬ್ರಾಂಚ್ ನಲ್ಲಿರುವಂತಾಗಬೇಕು. ಕನ್ನಡ ಮತ್ತು ತುಳು ಮಾತನಾಡುವವರು ಕಡ್ಡಾಯವಾಗಿ ಒಂದೊಂದು ಬ್ಯಾಂಕ್ ಶಾಖೆ ಯಲ್ಲಿರಬೇಕು" ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಸೂಚಿಸಿದರು.
"ಸರಕಾರದ ಯೋಜನೆಯ ಬಗ್ಗೆ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ಕೊರತೆ ಕೆಲ ಶಾಖೆಗಳಲ್ಲಿದೆ. ಈ ನಿಟ್ಟಿನಲ್ಲಿ ಸರಿಯಾದ ನಿರ್ದೇಶನಗಳನ್ನು ಅವರಿಗೆ ನೀಡಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ದೊರಕಿಸುವ ಕಾರ್ಯ ಮಾಡಲಾಗುತ್ತಿದೆ" ಎಂದು ನಳಿನ್ ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, "ಶಿಕ್ಷಣ ಆರೋಗ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಜನಸಾಮಾನ್ಯರಿಗೆ ಅನುಕೂಲವಾಗಿಸಲು ಜನಾರ್ಧನ ಪೂಜಾರಿವರು ಸಾಲ ಮೇಳ ನಡೆಸಿದ್ದರು. ಇದೀಗ ಹೊಸ ಬಗೆಯಲ್ಲಿ ಸಾಲಸಂಪರ್ಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಳಿನ್ ಕುಮಾರ್ ಕಟೀಲು ಅವರು ಆಧುನಿಕ ಸಾಲ ಮೇಳದ ರುವಾರಿ ಎನ್ನಿಸಿದ್ದಾರೆ" ಎಂದರು.
ಸಚಿವ ಎಸ್.ಅಂಗಾರ ಮಾತನಾಡಿ, "ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ" ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾತನಾಡಿ, "ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ನೇಮಕಾತಿ ನೀಡುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು. ನವೋದಯ ಗುಂಪಿನ ಸದಸ್ಯೆಯರಿಗೆ ಮುಂದಿನ ಜನವರಿಗೆ ಸಮವಸ್ತ್ರ ವಿತರಿಸುವುದರ ಜತೆಗೆ ಹೀಗಿರುವ ಗುಂಪನ್ನು 40 ಸಾವಿರ ನವೋದಯ ಗುಂಪನ್ನು 80 ಸಾವಿರಕ್ಕೆ ಹೆಚ್ಚಿಸಲಾಗುವುದು" ಎಂದರು.
ಶಾಸಕರಾದ ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ ವೈ.,ಹರೀಶ್ ಪೂಂಜಾ,ವೇದವ್ಯಾಸ ಕಾಮತ್, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಮಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಜಿಪಂ.ಸಿಇಒ ಡಾ.ಕುಮಾರ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದಿ.ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಅಲೆಮಾರಿ, ಆರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ನಬಾಡ್೯ ಡಿಡಿಎಂ.ಸಂಗೀತಾ ಎಸ್.ಕರ್ತ, ವಿವಿಧ ಬ್ಯಾಂಕ್ ಅಧಿಕಾರಿಗಳಾದ ಯೋಗೀಶ್ ಆಚಾರ್ಯ, ಗಾಯತ್ರಿ, ರಾಜೇಶ್ ಗುಪ್ತಾ, ವಿನಯ ಭಟ್ ವಿ.ಜೆ., ಸೂರ್ಯ ನಾರಾಯಣ, ಅಮಿತ್ ಕುಮಾರ್, ಶ್ರೀಕಾಂತ್ ಕೆ. ದಾಮೋದರ,ಮಹೇಶ್, ಸಹಾಯಕ ಕಮೀಷನರ್ ಮದನ್ ಮೋಹನ್, ತಹಶೀಲ್ದಾರ್ ರಶ್ಮೀ ಎಸ್.ಆರ್. ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಭಗವಂತ ಖೂಬ,ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ . ರಾಜೇಂದ್ರಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಲೀಡ್ ಬ್ಯಾಂಕ್ ಮೇನೇಜರ್ ಪ್ರವೀಣ್ ಎಂ.ಪಿ. ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಸ್ತಾವನೆಗೈದರು.
ಪ್ರಧಾನಿ ಮಂತ್ರಿ ಅವಾಜ್ ಯೋಜನೆಯಡಿ ಸಾಲ ಮಂಜೂರಾತಿ ಪತ್ರ, ಸ್ಟ್ಯಾಂಡಪ್ ಇಂಡಿಯಾ ಯೋಜನೆಯಡಿ ಸಹಿತ ವಿವಿಧ ಯೋಜನೆಯಡಿ ಸಾಲ ಮಂಜೂರಾತಿಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಡಾ.ಶಿವಪ್ರಕಾಶ್, ಐರಿನ್ ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನ: ಭವನದ ಹೊರಭಾಗ ಹಾಗೂ ಕೆಳಮಹಡಿಯಲ್ಲಿ ಬ್ಯಾಂಕ್ ನ ಯೋಜನೆಗೆ ಸಂಬಂಧಪಟ್ಟಂತೆ ವಿವಿಧ ಪ್ರದರ್ಶನ ಮಳಿಗೆ ಹಾಗೂ ಮಹಿಳಾ ಮತ್ತು ಮಕ್ಳಳ ಅಭಿವೃದ್ಧಿ ಇಲಾಖೆ,ತೋಟಗಾರಿ ಸಹಿತ ವಿವಿಧ ಇಲಾಖೆಗೆ ಸಂಬಂಧಿಸಿದ ಮಾರಾಟ ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಪುನೀತ್ ಗೆ ಶೃದ್ಧಾಂಜಲಿ: ಕಾರ್ಯಕ್ರಮ ಮುನ್ನ ಶುಕ್ರವಾರ ನಿಧನರಾದ ಯುವ ಚಿತ್ರನಟ ಪುನೀತ್ ರಾಜ್ ಅವರ ಆತ್ಮಕ್ಕೆ ಚಿರಶಾಂತಿ ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಸಮರ್ಪಿಸಲಾಯಿತು.ಚಿತ್ರನಟ ಮಾತ್ರವಲ್ಲ ಅವರ ಸಾಮಾಜಿಕ ಕಾರ್ಯವನ್ನು ಸಂಸದ ನಳಿನ್ ಕುಮಾರ್ ಕಟೀಲ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಈ ಸಂದರ್ಭದಲ್ಲಿ ಸ್ಮರಿಸಿದರು.
ಮಧ್ಯಾಹ್ನದ ಬಳಿಕ ಬ್ಯಾಂಕ್ನ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಎಸ್ ಡಿಸಿಸಿ ಬ್ಯಾಂಕ್ ನ ಸಂಚಾರಿ ಬ್ಯಾಂಕ್ ಗೆ ಚಾಲನೆ:
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಜಾರಿಗೆ ತರಲಾದ ಮೊಬೈಲ್ ಬ್ಯಾಂಕ್ನ ಬಸ್ಗೆ ಕೇಂದ್ರ ಸಚಿವ ಭಗವಂತ ಖೂಬ ಅವರು ಉದ್ಘಾಟಿಸಿ ಚಾಲನೆ ನೀಡಿ ಶುಭಹಾರೈಸಿದರು.ಸಂಸದ ನಳಿನ್ ಕುಮಾರ್ ಕಟೀಲ್, ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ಕುಮಾರ್, ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕುಮಾರ್, ಜಿಪಂ ಸಿಇಒ ಡಾ.ಕುಮಾರ, ಸ್ಕ್ಯಾಡ್ಸ ಅಧ್ಯಕ್ಷ ರವೀಂದ್ರ ಕಂಬಳಿ, ನಿಗಮದ ಅಧ್ಯಕ್ಷರುಗಳಾದ ಸಂತೋಷದ ಕುಮಾರ್ ರೈ, ರವೀಂದ್ರ ಶೆಟ್ಟಿ ಮೊದಲಾದವರಿದ್ದರು.