ಕಾರ್ಕಳ, ಅ.29 (DaijiworldNews/PY): ನೆರೆಮನೆಯ ವ್ಯಕ್ತಿಯೊಬ್ಬ ಮಹಿಳೆಯರಿಗೆ ಕತ್ತಿಯಿಂದ ಕಡಿದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವ ಘಟನೆ ಕುಕ್ಕುಂದೂರು ಪಿಲಿಚಂಡಿ ದೈವಸ್ಥಾನದ ಬಳಿಯಲ್ಲಿ ನಡೆದಿದೆ.
ಕುಕ್ಕುಂದೂರು ಪಿಲಿಚಂಡಿ ದೈವಸ್ಥಾನದ ಬಳಿಯ ನಿವಾಸಿ ಹುಸೇನ್ ಪ್ರಕರಣದ ಆರೋಪಿ. ನೆರೆಮನೆಯ ದುರ್ಗ, ನಲ್ಲಮ್ಮ ಹಾಗೂ ಜ್ಯೋತಿ ಘಟನೆಯಲ್ಲಿ ಗಾಯಗೊಂಡವರು.
ಅಕ್ಟೋಬರ್ 27ರ ರಾತ್ರಿ 10ಗಂಟೆಗೆ ಈ ಘಟನೆ ಸಂಭವಿಸಿದೆ. ಜ್ಯೋತಿ ಎಂಬವರು ತನ್ನ ತಾಯಿ ನಲ್ಲಮ್ಮರೊಂದಿಗೆ ತಮ್ಮ ಮನೆಯ ಪಕ್ಕದಲ್ಲಿರುವ ಗಂಡನ ಅಣ್ಣನ ಹೆಂಡತಿ ದುರ್ಗಾ ಎಂಬವರ ಮನೆಯಲ್ಲಿ ಟಿ ವಿ ನೋಡುತ್ತಿದ್ದರು. ಅದೇ ಸಮಯದಲ್ಲಿ ಅಪಾದಿತ ಹುಸೇನ್ ಎಂಬವನು ತನ್ನ ಮನೆಯಲ್ಲಿ ನಿಂತುಕೊಂಡು ದುರ್ಗಾಳನ್ನು ಉದ್ದೇಶಿಸಿ ಫ್ಯಾಕ್ಟರಿಗೆ ಹೋಗಿ ತಡವಾಗಿ ಬರುತ್ತೀಯ ಎಂದು ಕೇಳಿದ್ದನು. ಆಗ ದುರ್ಗಾಳು ಹೊರಗೆ ಬಂದು ನಿನಗೆ ನನ್ನ ವಿಚಾರ ಯಾಕೆ ಎಂದು ಪ್ರಶ್ನಿಸಿದರು. ಇದರಿಂದ ಕುಪಿತಗೊಂಡ ಆರೋಪಿ ಹುಸೇನ್ ಕತ್ತಿಯನ್ನು ಹಿಡಿದುಕೊಂಡು ದುರ್ಗಾಳ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ದುರ್ಗಾಳಿಗೆ ಕಡಿಯಲು ಮೊದಲಿಗೆ ವಿಫಲ ಯತ್ನ ನಡೆಸಿದನು.
ಅದೇ ಸಂದರ್ಭದಲ್ಲಿ ತಡೆಯಲು ಮುಂದಾದ ಜ್ಯೋತಿ ಅವರ ಬಲಕೈಗೆ ಗಾಯವಾಗಿದೆ. ಅದೇ ಸಂದರ್ಭದಲ್ಲಿ ದುರ್ಗಾಳಿಗೆ ಹುಸೇನ್ ಕತ್ತಿಯಿಂದ ಹೊಡೆದು ತಲೆಗೆ ಗಾಯಗೊಳಿಸಿದ್ದಾನೆ. ಜ್ಯೋತಿಯವರ ತಾಯಿ ನಲ್ಲಮ್ಮ ಅವರ ಕಾಲಿಗೆ ಕಲ್ಲನ್ನು ಎಸೆದು ಗಾಯಗೊಳಿಸಿದ ಆರೋಪಿ ಹುಸೇನ್ ಅವಾಚ್ಯ ಶಬ್ದಗಳಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.