ಉಳ್ಳಾಲ, ಅ. 28 (DaijiworldNews/SM): ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬುಧವಾರದಂದು ಭೀಕರ ಅಪಘಾತ ನಡೆದಿದ್ದು, ಬುಲೆಟ್ ಸವಾರರೊಬ್ಬರು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದರು. ಇದೇ ದಿನ ವರ್ಷದ ಹಿಂದೆ ತೊಕ್ಕೊಟ್ಟು ಫ್ಲೈ ಓವರ್ ಕೊನೆಗೊಂಡು ಉಳ್ಳಾಲ ತಿರುಗುವ ಜಾಗದಲ್ಲಿ ನಡೆದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದರು. ಈ ಎರಡೂ ದುರಂತಗಳು ನಡೆದಿರೂವುದು ಒಂದೇ ದಿನವಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಅಕ್ಟೋಬರ್ 27ರ ಬುಧವಾರದಂದು ಸಂಜೆ ಬುಲೆಟ್ ಬೈಕ್ ಸವಾರರೊಬ್ಬರು ಮೇಲ್ಸೇತುವೆಯಿಂದ ಎಸೆಯಲ್ಪಟ್ಟು ದುರಂತ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಮೇಲ್ಸೇತುವೆಯಿಂದ ಎಸೆಯಲ್ಪಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಫ್ಲೈ ಓವರ್ ಮೇಲೆ ಅಪಘಾತ ಯಾವ ರೀತಿ ಸಂಭವಿಸಿದೆ ಎಂಬುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹಾಗೂ ಯಾವುದೇ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾದ ಮಾಹಿತಿ ಸಿಕ್ಕಿಲ್ಲ.
ಇನ್ನು ಕಳೆದ ವರ್ಷವೂ ಅ.27ರಂದು ಇದೇ ಭಾಗದಲ್ಲಿ ನಡೆದ ಅಪಘಾತವೊಂದರಲ್ಲಿ ಇಬ್ಬರು ದುರಂತ ಅಂತ್ಯ ಕಡಿದ್ದರು. ಕಳೆದ ವರ್ಷ ಅ.27ರಂದು ಬೈಕ್ ಸವಾರ ರಾಯನ್ ಫೆರ್ನಾಂಡಿಸ್, ಅವರ ಪತ್ನಿ ಪ್ರಿಯಾ ಫೆರ್ನಾಂಡಿಸ್ ಸಾವನ್ನಪ್ಪಿದ್ದರು. ಇನ್ನೊಂದು ಅಪಘಾತದಲ್ಲಿ ಕಾರು ಡಿವೈಡರ್ ಹಾರಿ ಇನ್ನೊಂದು ಬದಿಯಲ್ಲಿನ ಸ್ಕೂಟರ್ ಗೆ ಢಿಕ್ಕಿ ಹೊಡೆದಿತ್ತು. ಹಿಂಬದಿ ಸವಾರೆ ವಸಂತಿ ನಾಯರ್(45) ಸಾವನ್ನಪ್ಪಿದ್ದರು.
ಎರಡೂ ಅಪಘಾತಗಳು ನಡೆದಿರುವುದು ಬಹುತೇಕ ಒಂದೇ ಪ್ರದೇಶದಲ್ಲಿ. ಅಲ್ಲದೆ ಅಪಘಾತ ನಡೆದಿರುವ ಸಮಯ ಕೂಡ ಬಹುತೇಕ ಒಂದೇ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು, ಸಾರ್ವಜನಿಕರು ವಿವಿಧ ರೀತಿಯಲ್ಲಿ ಚರ್ಚೆಯನ್ನು ನಡೆಸುತ್ತಿದ್ದಾರೆ. ಒಂದು ವರ್ಷದ ಅಂತರದಲ್ಲಿ ನಾಲ್ಕು ಜೀವಗಳನ್ನು ಬಲಿ ಪಡೆದಿದ್ದು, ಸಾರ್ವಜನಿಕ ವಲಯದಲ್ಲಿ ಹಲವಾರು ಶಂಕೆ, ಅನುಮಾನವನ್ನುಂಟು ಮಾಡಿದೆ. ಮೇಲ್ಸೇತುವೆಯಲ್ಲಿ ಪ್ರತೀ ವರ್ಷ ಯಾವುದೋ ಕಾರಣಕ್ಕೆ ನರಬಲಿ ಪಡೀತಾ ಇದ್ಯಾ? ಎನ್ನುವ ಪ್ರಶ್ನೆ ಕಾಡಲಾರಂಬಿಸಿದ್ದು, ನರಬಲಿ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನವನ್ನುಂಟು ಮಾಡಿದೆ.