ಬಂಟ್ವಾಳ, ಅ.28 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸರಕಾರದ ಎಲ್ಲಾ ಜನಪರ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರದ "ಸಾಲ ಸಂಪರ್ಕ" ಮತ್ತು ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಅ.30 ರಂದು ಬಂಟವಾಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗುರುವಾರ ಬಂಟವಾಳದ ಬಂಟರ ಭವನದಲ್ಲಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ,ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಸಾರ್ವಜನಿಕ, ಖಾಸಗಿ ವಲಯ, ಪ್ರಾದೇಶಿಕ ಬ್ಯಾಂಕುಗಳು, ಡಿಸಿಸಿಬಿ, ಎಂಎಫ್ ಐಗಳು, ಎಸ್ ಬಿ ಎಫ್ ಸಿಗಳು, ನಬಾರ್ಡ್, ಕೆವಿಐಸಿ, ಕೆವಿಐಬಿ, ಡಿಐಸಿ, ಮೀನುಗಾರಿಕೆ, ಪಶುಸಂಗೋಪನೆ ಸಹಿತ ಇತರ ಇಲಾಖೆಗಳು ಇದರಲ್ಲಿ ಭಾಗವಹಿಸಲಿದ್ದು, ವಿವಿಧ ಸಾಲ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು, ಸಾಲದ ಅರ್ಜಿ ಸ್ವೀಕಾರ,ಮಂಜೂರಾತಿ, ತಾತ್ವಿಕ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುವುದು ಎಂದರು.
ವಿಶೇಷವಾಗಿ ಆತ್ಮನಿರ್ಭರ ಯೋಜನೆಗಳಾದ ಪಿಎಂಎಸ್ ಬಿವೈ, ಪಿಎಂಜೆಜೆಬಿವೈ, ಎಪಿವೈಯಂತಹ ವಿವಿಧ ಪಿಎಂ ಜನಸುರಕ್ಷಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.
ಗ್ರಾಹಕರಿಗೆ ಉತ್ತಮ ಸೇವೆ ನೀಡಿವ ನಿಟ್ಟಿನಲ್ಲಿ ಸ್ಥಳೀಯ ಕನ್ನಡ ಭಾಷಕಾರರನ್ನು ನೇಮಿಸಲಾಗುತ್ತದೆ. ಐಬಿಬಿ ಪರೀಕ್ಷೆ ಕನ್ನಡದಲ್ಲೇ ಬರೆಯಬೇಕು ಎಂಬ ನಿಯಮವು ಇದೆಯಲ್ಲದೆ.ಹೊರ ರಾಜ್ಯದ ಸಿಬ್ಬಂದಿಗಳಿಗೆ ಯೂಟ್ಯೂಬ್ ಹಾಗೂ ಕನ್ನಡ ಸಂಘಗಳ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕೆನರಾ ಬ್ಯಾಂಕ್ ನ ಮಹಾ ಪ್ರಬಂಧಕರಾದ ಯೋಗೀಶ್ ಆಚಾರ್ಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದು ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು,ಸಚಿವರಾದ ಎಸ್ .ಅಂಗಾರ,ಕೋಟಾ ಶ್ರೀನಿವಾಸ ಪೂಜಾರಿ,ಜಿಲ್ಲೆಯ ಎಲ್ಲಾ ಶಾಸಕರು,ವಿವಿಧ ನಿಗಮದ ಅಧ್ಯಕ್ಷ ರು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ,ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.,ಜಿಪಂ ಇಸಿಒ ಡಾ.ಕುಮಾರ,ಜಿಲ್ಲಾ ಅಗ್ರಣಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಪ್ರವೀಣ್ ,ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ ಮೊದಲಾದವರಿದ್ದರು.