ಕಾರ್ಕಳ, ಅ.28 (DaijiworldNews/HR): ತಾಲೂಕಿನಾದ್ಯಂತ ಗುರುವಾರ ಕನ್ನಡ ರಾಜ್ಯೋತ್ಸವ ಆಚರಣೆಯ 5 ದಿನಗಳ ಮೊದಲೇ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಕನ್ನಡದ ಕಂಪು ಸೂಸುವ ಸಮೂಹ ಗೀತಗಾಯನ ಕಾರ್ಯಕ್ರಮಗಳು ನಡೆದವು.
ರಾಜ್ಯೋತ್ಸವದ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯವ್ಯಾಪಿ ಸೂಚಿಸಿತ್ತು. ರಾಜ್ಯೋತ್ಸವದ ಪೂರ್ವವಾಗಿ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮಗಳು ವಿಶ್ವ ವ್ಯಾಪಿ ನಡೆದಿದೆ.
ಕಾರ್ಕಳ ತಾಲೂಕಿನ 100ಕ್ಕೂ ಹೆಚ್ಚು ಕಡೆಗಳಲ್ಲಿ ಗೀತಗಾಯನ ನಡೆಯಿತು. ನದಿ ತಟ, ದೇವಸ್ಥಾನ, ಸರಕಾರಿ ಕಚೇರಿಗಳು, ಸಂಘ ಸಂಸ್ಥೆಗಳ ಮುಂದೆ ನಾಡಗೀತೆ ಜೈ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೊದಲಾದ ಗೀತೆಗಳು ಅನುರಣಿಸಿದವು.
ತಾಲೂಕು ಆಡಳಿತದಿಂದ ಗೊಮ್ಮಟೇಶ್ವರ ಬೆಟ್ಟದಲ್ಲಿ ನಡೆದ ಗೀತಾಗಾಯನ ಸಮೂಹ ಗೀತೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಪುರಂದರ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಅಧಿಕಾರಿಗಳು, ಪುರಸಭೆ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚತುರ್ಮುಖ ಬಸದಿ, ಶ್ರೀ ವೆಂಕಟರಮಣ ದೇವಸ್ಥಾನ, ಕನ್ನಡ ಮತ್ತು ಸಂಸ್ಕೃತಿ ಸಚಿವರ ವಿಕಾಸ ಕಚೇರಿ, ತಾಲೂಕು ಸರಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಮೆಸ್ಕಾಂ ಕಚೇರಿ, ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ಸಾಮೂಹಿಕ ಗೀತಗಾಯನ ನಡೆಯಿತು. ಕಾರ್ಕಳ ತಾಲೂಕಿನ ವಿವಿಧ ಶಾಲೆಗಳ ಹಿರಿಯ ವಿದ್ಯಾರ್ಥಿಗಳು, ಕಲಾವಿದರು ಭಾಗವಹಿಸಿದ್ದರು.