ಕಾರ್ಕಳ, ಅ.27 (DaijiworldNews/PY): "ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕುಟುಂಬ ಪದ್ಧತಿಯು ಸಹಕಾರ ವ್ಯವಸ್ಥೆಗೆ ಅಡಿಪಾಯವಾಗಿದೆ. ಸಹಕಾರ ಭಾರತೀಯ ದೇಶದಲ್ಲಿಯೇ ಅತಿ ದೊಡ್ಡ ಸಹಕಾರ ಕ್ಷೇತ್ರದ ರಾಷ್ಟ್ರೀಯ ಸಂಘಟನೆಯಾಗಿದ್ದು, ಕಳೆದ ನಾಲ್ಕು ದಶಕಗಳಿಂದ ಸಹಕಾರ ವ್ಯವಸ್ಥೆಯ ಸುಧಾರಣೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ಕಾಲಕಾಲಕ್ಕೆ ಸಹಕಾರಿ ಕಾಯ್ದೆಯಲ್ಲಿ ಹಲವಾರು ಬದಲಾವಣೆಗಳಿಗೆ, ಜನಪರ ಯೋಜನೆಗಳನ್ನು ಸರಕಾರದ ಮೂಲಕ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ, ಇದೀಗ ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸುವುದರ ಮೂಲಕ ಸಹಕಾರ ಭಾರತೀಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ" ಎಂದು ಕರ್ನಾಟಕ ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ನಗರದ ಹೋಟೆಲ್ ಪ್ರಕಾಶ್ನ ಸಂಭ್ರಮ ಸಭಾಂಗಣದಲ್ಲಿ ಸಹಕಾರ ಭಾರತಿ ಕಾರ್ಕಳ ತಾಲೂಕು ಆಶ್ರಯದಲ್ಲಿ ಸಹಕಾರಿ ರಂಗದ ಪ್ರಮುಖರಿಗೆ ಕಾರ್ಕಳ ತಾಲೂಕು ಮಟ್ಟದ ಅಭ್ಯಾಸ ವರ್ಗದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಕಳ ತಾಲೂಕು ಆರೆಸ್ಸೆಸ್ ಸಂಘಚಾಲಕ ಡಾ. ಉದಯ್ ಕುಮಾರ್. ಕೆ. ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, "ಸಹಕಾರ ರಂಗದಲ್ಲಿ ತೊಡಗಿಸಿಕೊಂಡಿರುವವರು ಸದಾ ಅಧ್ಯಯನಶೀಲರಾಗಿದ್ದುಕೊಂಡು, ಅಭ್ಯಾಸ ವರ್ಗದ ಮೂಲಕ ದೇಶದ ಸಹಕಾರಿ ರಂಗದಲ್ಲಿ ಆಗುತ್ತಿರುವ ಬದಲಾವಣೆ, ಹೊಸ ವಿಚಾರಗಳನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಳ್ಳಬೇಕು" ಎಂದು ತಿಳಿಸಿದರು.
ಬ್ರಹ್ಮಾವರದ ಲೆಕ್ಕಪರಿಶೋಧಕ ಗಿರೀಶ್ ಪೈ ಸಮಾರೋಪ ಭಾಷಣದಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಅನ್ವಯವಾಗುವಂತೆ ಆದಾಯ ತೆರಿಗೆ ಪದ್ಧತಿಯಲ್ಲಿ ಆಗಿರುವ ಇತ್ತೀಚಿನ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸಹಕಾರ ಭಾರತಿ ತಾಲೂಕು ಅದ್ಯಕ್ಷ ಹರೀಶ್ ಕುಮಾರ್ ಕಲ್ಯಾ ಅದ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾದ್ಯಕ್ಷ ಬೋಳ ಸದಾಶಿವ ಶೆಟ್ಟಿ, ಹಾಲು ಉತ್ಪಾದಕರ ಪ್ರಕೊಷ್ಟದ ಜಿಲ್ಲಾ ಸಂಚಾಲಕ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಶಾರೀರಿಕ್ ಪ್ರಮುಖ ಸತೀಶ್ ಕುತ್ಯಾರ್, ಸಹಕಾರಿ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳೂರು ಇದರ ಅಧ್ಯಕ್ಷ ಹರೀಶ್ ಆಚಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.
ತಾಲೂಕು ಪ್ರದಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ ನಿಟ್ಟೆ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಕಾರ್ಲ, ಸಾಣೂರು ಆನಂದ ಶೆಟ್ಟಿ, ಸುರೇಶ್ ರಾವ್, ಶಂಕರ್ ನಾಯ್ಕ್, ಪ್ರಶಾಂತ್ ಶೆಟ್ಟಿ ಅಜೆಕಾರು, ರವೀಂದ್ರ ನಾಯಕ್ ನೀರೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಲಾರು ಸುಧಾಕರ್ ಶೆಣೈ ನಿರೂಪಿಸಿ, ವಂದನಾರ್ಪಣೆಗೈದರು.