ಕುಂದಾಪುರ, ಅ 27(DaijiworldNews/MS): ಕರಾವಳಿ ಭಾಗಕ್ಕೆ ತೀರಾ ಅಪರೂಪದ್ದಾದ ಕಪ್ಪು ಭತ್ತ ತಳಿಯನ್ನು ಕುಂದಾಪುರ ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ಪ್ರಾಯೋಗಿಕವಾಗಿ ವ್ಯವಸಾಯ ಮಾಡಲಾಗಿದೆ. ಈ ತಳಿ ಉತ್ತಮ ಇಳುವರಿ ನೀಡಿದ್ದು ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ವಿಸ್ತರಣೆಯಾಗುವ ಮೂನ್ಸೂಚನೆಯನ್ನು ನೀಡಿದೆ.
ಅಸೋಡು ಬಂಡ್ಸಾಲೆಯ ಯುವ ಕೃಷಿಕ ಸುಜಿತ್ ಕುಮಾರ್ ಶೆಟ್ಟಿ ಭತ್ತ ಬೇಸಾಯದಲ್ಲಿ ವಿಶೇಷವಾದ ಒಲವು ಹೊಂದಿರುವ ಬೇಸಾಯಗಾರ. ಈ ದಿನಗಳಲ್ಲಿಯೂ ಕೂಡಾ 15 ಎಕ್ರೆಯಷ್ಟು ಭತ್ತ ಬೇಸಾಯ ಮಾಡುತ್ತಾರೆ. ಇವರ ಭತ್ತ ಬೇಸಾಯದ ಆಸಕ್ತಿ ಕಂಡು ಸ್ನೇಹಿತರೊಬ್ಬ ಸ್ನೇಹಿತ ಮಂಜುನಾಥ ಹೆಬ್ಬಾರ್ ಉತ್ತರ ಪ್ರದೇಶದಿಂದ 5 ಕೆ.ಜಿ ಕಪ್ಪು ಭತ್ತದ ಬೀಜವನ್ನು ಇವರಿಗೆ ತಂದುಕೊಟ್ಟರು. ಸುಜಿತ್ ಕುಮಾರ್ ಶೆಟ್ಟಿಯವರು ಪ್ರಾಯೋಗಿಕವಾಗಿ ಈ ಮುಂಗಾರು ಹಂಗಾಮಿನಲ್ಲಿ ಟ್ರೇ ಮಾದರಿ ನರ್ಸರಿಯಲ್ಲಿ ಸಸಿಮಡಿ ತಯಾರಿಸಿ ನಾಟಿ ಯಂತ್ರದ ಮೂಲಕ ಅರ್ಧ ಎಕ್ರೆ ಪ್ರದೇಶದಲ್ಲಿ ನಾಟಿ ಮಾಡಿದರು. ಮೊಳಕೆಯೊಡೆಯುತ್ತಲೇ ಗಾಢ ಕಪ್ಪು ಬಣ್ಣದಿಂದ ಕಂಗೊಳಿಸುತ್ತ, ನೇಜಿ ಬೆಳೆಯುತ್ತಿದ್ದಂತೆ ಗದ್ದೆಯೇ ಕಪ್ಪು ಬಣ್ಣಕ್ಕೆ ತಿರುಗಿತ್ತು. ತೆಂಡೆಯೊಡೆಯಲು ಆರಂಭವಾದಂತೆ ಕಪ್ಪು ಬಣ್ಣ ಗಾಢ ಹಸಿರು ವರ್ಣಕ್ಕೆ ತಿರುಗಿತು. ಸುಮಾರು 7 ಅಡಿ ಎತ್ತರಕ್ಕೆ ಬೆಳೆದ ಪೈರು ತೆನೆ ಬಿಟ್ಟಿದೆ. ಕದಿರು ಕೂಡಾ ಮಾಮೂಲಿ ಭತ್ತಕ್ಕಿಂತ ಆರೋಗ್ಯಕರವಾಗಿದ್ದು ಒಂದು ತೆನೆಯಲ್ಲಿ 160 ರಷ್ಟು ಭತ್ತವಿದೆ. ಜೊಳ್ಳು ಕಡಿಮೆ, ಹತ್ತಿರತ್ತಿರ ಭತ್ತ, ಭತ್ತವೂ ಕೂಡಾ ಸುದೃಢವಾಗಿದೆ. ಸುಮಾರು 7 ಅಡಿ ಉದ್ದದ ಹುಲ್ಲು ಸಿಗುತ್ತದೆ. ಎಕ್ರೆಗೆ ಸುಮಾರು 22ಕ್ವಿಂಟಾಲು ಭತ್ತದ ನಿರೀಕ್ಷೆ ಹೊಂದಲಾಗಿದೆ.
ಸುಮಾರು 110 ದಿನದಲ್ಲಿ ಕಟಾವಿಗೆ ಬರುತ್ತದೆ. ಈ ಕಪ್ಪು ಭತ್ತ ತಳಿ ನೀರು ನಿಲ್ಲುವ ಬಯಲು ಪ್ರದೇಶಕ್ಕೆ ಸೂಕ್ತವಲ್ಲ. ಎತ್ತರ ಪ್ರದೇಶ, ಮಳೆಯಾಶ್ರಯಿತ ಪ್ರದೇಶಕ್ಕೆ ಹೆಚ್ಚು ಉಪಯೂಕ್ತ. ಏಕೆಂದರೆ ಇದು ಏತ್ತರದ ಪೈರು ಆಗಿರುವುದರಿಂದ ತೆನೆ ಬಿಡುತ್ತಲೇ ಗದ್ದೆಗೆ ಒರಗುತ್ತದೆ. ಕೆಸರು ಗದ್ದಯಾದರೆ ನಷ್ಟವಾಗುತ್ತದೆ. ಬೆಟ್ಟು ಪ್ರದೇಶವಾದರೆ ಹಾನಿ ಅಂಶ ಕಡಿಮೆ. ಇದು ದೇಸಿ ತಳಿಯಾದ್ದರಿಂದ ರೋಗ ನಿರೋಧಕ ಶಕ್ತಿ ಇರುತ್ತದೆ.
ಬಹಳ ಬೇಡಿಕೆ
ಕಪ್ಪು ಭತ್ತ ಈ ಭಾಗದಲ್ಲಿ ಪ್ರಥಮ ಆದ್ದರಿಂದ ಉತ್ತಮ ಇಳುವರಿ, ರೋಗ ನಿರೋಧಕ ತಳಿ ಎನ್ನುವುದನ್ನು ಮನಗಂಡ ಪರಿಸರದ ರೈತರು ತಾವು ಕೂಡಾ ಈ ತಳಿಯನ್ನು ಪ್ರಯೋಗಿಸುವ ಮನ ಮಾಡಿದ್ದಾರೆ. ಸುಜಿತ್ ಕುಮಾರ್ ಶೆಟ್ಟಿಯವರಲ್ಲಿ ಈಗಾಗಲೇ 10-15 ಮಂದಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಹಾಗಾಗಿ ಈ ಬಾರಿ ಬೆಳೆದ ಭತ್ತ ಸಂಪೂರ್ಣ ಬೀಜಕ್ಕೆ ಬಳಕೆಯಾಗಲಿದೆ.
ಅಕ್ಕಿ ಕೆ.ಜಿಗೆ 260 ರೂಪಾಯಿ!
ಈ ಅಕ್ಕಿ ಕೆ.ಜಿ ರೂಪಾಯಿ 260 ರೂಪಾಯಿ ಪ್ರಸ್ತುತ ಮಾರುಕಟ್ಟೆಯಲ್ಲಿ ಇದೆ ಎನ್ನಲಾಗಿದೆ. ಈ ಅಕ್ಕಿ ಮೃದುತ್ವ, ಸಹಜ ಪರಿಮಳ, ಪೋಷಕ ನಾರು, ಪ್ರೋಟೀನ್, ಕಬ್ಬಿಣ, ವಿಟಮಿನ್ ಇ, ಕ್ಯಾಲ್ಸಿಯಂ, ಮೆಗ್ನೀಷಿಯಂನಿಂದ ಸಮೃದ್ದವಾಗಿದೆ. ದೇಹದಲ್ಲಿ ಸುಲಭವಾಗಿ ಪಚನವಾಗುತ್ತದೆ. ಮಲಬದ್ಧತೆ, ಮಧುಮೇಹವನ್ನು ನಿಯಂತ್ರಿಸುತ್ತದೆ. ಕ್ಯಾನ್ಸರ್ ರೋಗವನ್ನು ದೂರವಿಡುವ ಗುಣವನ್ನು ಹೊಂದಿದೆ ಎನ್ನಲಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಈ ಅಕ್ಕಿ ಮಾರಾಟವಾಗುತ್ತಿದೆ.
ಬ್ಲಾಕ್ರೈಸ್ ಈ ಪ್ರದೇಶಕ್ಕೆ ಒಗ್ಗುತ್ತದೆ. ನಾನು ಅರ್ಧ ಎಕರೆ ಮಾಡಿದ್ದೇನೆ. ಒಳ್ಳೆಯ ಇಳುವರಿ ಬಂದಿದೆ. 7 ಅಡಿ ಎತ್ತರ ಪೈರು ಬೆಳೆದಿದೆ. ನೆಲೆಕ್ಕೆ ಬಿದ್ದಿದೆ. ಹಿಂಗಾರು ಹಂಗಾಮಿಗೆ ಇನ್ನೂ ಚೆನ್ನಾಗಿ ಬರಬಹುದು. ಇದನ್ನು ಮುಂದುವರಿಸುವ ಚಿಂತನೆ ಇದೆ -ಸುಜಿತ್ ಕುಮಾರ್ ಶೆಟ್ಟಿ, ಕೃಷಿಕರು.
ಕಪ್ಪು ಭತ್ತ ಈ ಭಾಗಕ್ಕೆ ಪ್ರಥಮವಾಗಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದೆ. ಔಷಧೀಯ ಗುಣ ಹೊಂದಿರುವುದರಿಂದ ಬೇಡಿಕೆ ಹೆಚ್ಚಿರುತ್ತದೆ. ಜನರ ಕುತೂಹಲ ಹೆಚ್ಚಿದೆ. ರೋಗ ನಿರೋಧಕ ತಳಿ ಇದಾಗಿರುವುದನ್ನು ಕಂಡುಕೊಂಡಿದ್ದೇವೆ.”-ಚೇತನ್ ಕುಮಾರ್ ಕೃಷಿ ಅಧಿಕಾರಿ