ಮಂಗಳೂರು, ಅ.27 (DaijiworldNews/PY): ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ವೆನ್ಲಾಕ್ ಆಗಮಿಸಿ ಒಂದು ಗಂಟೆ ಕಾಲ ಕಾಯವಂತೆ ಮಾಡಿದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಕುರಿತು ಡಿಎಂಒ ಅವರು ಸಮಗ್ರ ತನಿಖೆ ನಡೆಸಿ 4 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸೂಚನೆ ನೀಡಿದ್ದಾರೆ.
ಕಾಸರಗೋಡು ಮೂಲದ ಮಹಿಳೆಯೋರ್ವರು ಉರಿಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಸೋಮವಾರ ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿತ್ತು. ಮಹಿಳೆಯನ್ನು ಅಲ್ಲಿನ ಜಿಲ್ಲಾಸ್ಪತ್ರೆಗೆ ಕರೆದೊಯ್ದ ಸಂದರ್ಭ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ ಸಂಜೆ ವೆನ್ಲಾಕ್ಗೆ ಬಂದಿದ್ದರು. ಈ ವೇಳೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ಐಸಿಯು ಖಾಲಿ ಇಲ್ಲ. ಈ ಬಗ್ಗೆ ಹೊಸ ಬ್ಲಾಕ್ನಲ್ಲಿ ವಿಚಾರಿಸಿ ಎಂದು ಹೇಳಿದರು ಎನ್ನಲಾಗಿದೆ. ಹೊಸ ಬ್ಲಾಕ್ನಲ್ಲಿ ಒಂದು ಗಂಟೆ ಕಾದರೂ ಅಲ್ಲಿಯೂ ಐಸಿಯು ಖಾಲಿ ಇಲ್ಲ, ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎನ್ನಲಾಗಿತ್ತು. ಈ ಸಂದರ್ಭ ರೋಗಿಯ ಜೊತೆಗಿದ್ದವರು ತರಾಟೆಗೆ ತೆಗೆದುಕೊಂಡ ನಂತರ ಮಹಿಳೆಯನ್ನು ದಾಖಲಿಸಿಕೊಂಡರೂ ಒಂದು ಗಂಟೆಯ ಬಳಿಕ ಸಾವನ್ನಪ್ಪಿದ್ದರು. ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಹಿಳೆಯ ಪತಿ ಮಾಹಿತಿ ನೀಡಿದ್ದು, "ಪತ್ನಿಗೆ ಉಸಿರಾಟದ ಹಿನ್ನೆಲೆ ವೆನ್ಲಾಕ್ಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ಎಷ್ಟು ಹೊತ್ತು ಕಾದರೂ ದಾಖಲಿಸಿಕೊಳ್ಳಲಿಲ್ಲ. ಬಳಿಕ ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರ ಗಮನಕ್ಕೆ ತಂದಿದ್ದು, ನಂತರ ವೆಂಟಿಲೇಟರ್ ಸೌಲಭ್ಯ ದೊರಕಿದ್ದು, ಪತ್ನಿಯನ್ನು ಉಳಿಸಿಕೊಳ್ಳಲಾಗಲಿಲ್ಲ" ಎಂದು ಆರೋಪಿಸಿದ್ದಾರೆ.
"ಮಾಹಿತಿ ಬಂದ ಕೂಡಲೇ ವೈದ್ಯಾಧಿಕಾರಿಗಳ ಬಳಿ ವಿಚಾರಿಸಿದ್ದೇನೆ. ರೋಗಿಯನ್ನು ಕರೆತರುವಾಗಲೇ ಸ್ಥಿತಿ ಹದಗೆಟ್ಟಿತ್ತು ಎಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ದಾಖಲಿಸಲು ವಿಳಂಬಿಸಿದ ಕಾರಣದಿಂದ ಈ ರೀತಿ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿರುವ ಕಾರಣ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದೇನೆ" ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.
"ಕಾಸರಗೋಡಿನ ರೋಗಿ ಬಂದ ಸಂದರ್ಭ ಇತರ ಮೂರು ರೋಗಿಗಳನ್ನು ದಾಖಲಿಸಲಾಗುತ್ತಿತ್ತು. ಅವರಿಗೆ ವ್ಯವಸ್ಥೆ ಕಲ್ಪಿಸಿ ಇವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿಲ್ಲ" ಎಂದು ವೆನ್ಲಾಕ್ನ ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ ಶಾನುಭೋಗ್ ಹೇಳಿದ್ದಾರೆ.
"ಈ ಬಗ್ಗೆ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ರೋಗಿಯ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕಾರ್ಕಳದ ವ್ಯಕ್ತಿಯ ಚಿಕಿತ್ಸೆಗೆ ತೊಂದರೆಯಾದ ಆರೋಪ ಬಂದ ಸಂದರ್ಭವೂ ಡಿಎಂಒ ಜೊತೆ ಮಾತನಾಡಿ ದಾಖಲಾತಿಗೆ ಸೂಚಿಸಿದ್ದೆ. ಈ ರೀತಿಯಾದ ಘಟನೆಗಳನ್ನು ತಪ್ಪಿಸುವ ಸಲುವಾಗಿ ವೆನ್ಲಾಕ್ ಹಳೆ ಕಟ್ಟಡದ ಕಾರಿಡಾರ್ ಸೇರಿದಂತೆ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು" ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.