ಮಂಗಳೂರು, ಅ.26 (DaijiworldNews/HR): ಜಿಲ್ಲೆಯಲ್ಲಿನ ಅನುದಾನಿತ, ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಯವರು ಖಾಸಗಿ ಶಾಲೆಗಳಿಂದಲೇ ಅಥವಾ ನಿರ್ದಿಷ್ಟ ಮಾರಾಟಗಾರರಿಂದಲೇ ಶಾಲಾ ಮಕ್ಕಳ ಪೋಷಕರು ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಹಾಗೂ ಇತರೆ ಲೇಖನ ಸಾಮಾಗ್ರಿಗಳನ್ನು ಖರೀದಿಸುವಂತೆ ಒತ್ತಾಯಿಸುವಂತಿಲ್ಲ" ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಪ್ರತಿ ತರಗತಿಗೆ ನಿಗದಿಪಡಿಸಿದ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಮತ್ತು ಇತರೆ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಪೋಷಕರು ಸ್ವತಂತ್ರವಾಗಿದ್ದು, ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ನೋಂದಣಿ ಮತ್ತು ಅನುಮತಿ ಪಡೆಯುವಾಗ ಹಾಗೂ ಕೇಂದ್ರ ಪಠ್ಯಕ್ರಮ ಶಾಲೆಗೆ ಸಂಯೋಜನೆಗೆ ಪಡೆಯುವಾಗ ಶಿಕ್ಷಣ ಇಲಾಖೆಯ ನಿಯಮಗಳನ್ನು ಅನುಸರಿಬೇಕೆಂಬ ಷರತ್ತಿನ ಮೇರೆಗೆ ನೋಂದಣಿ, ಮಾನ್ಯತೆ ಹಾಗೂ ನಿರಾಕ್ಷೇಕ್ಷಣಾ ಪತ್ರ ನೀಡಲಾಗಿರುತ್ತದೆ" ಎಂದರು.
ಇನ್ನು ಇಂತಹ ಪ್ರಕರಣಗಳು ವರದಿಯಾದಲ್ಲೀ ಅಂತಹ ಶಾಲೆಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು, ಇದಕ್ಕೆ ಸಂಬಂಧಿಸಿದಂತೆ ಪೋಷಕರು ನೇರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಂಬಂಧಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.