ಉಡುಪಿ, ಅ.26 (DaijiworldNews/HR): ಶ್ರೀ ಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ , ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಇವರ ಸಂಯೋಜನೆಯಲ್ಲಿ ನಡೆಯುತ್ತಿರುವ ಯಕ್ಷ ಅಷ್ಟಾಹ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅವರಿಗೆ ಪ್ರಥಮ ವರ್ಷದ ತಲ್ಲೂರ್ ಫ್ಯಾಮಿಲಿ ಪ್ರಶಸ್ತಿ 2021ನ್ನು ಪ್ರದಾನ ಮಾಡಲಾಯಿತು.
ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ, "ಕಲಾವಿದ ಎಂದರೆ ಕಲೆಯನ್ನು ರಕ್ಷಿಸಿ, ಬೆಳೆಸುವವ. ಮುಂದಿನ ಪೀಳಿಗೆ ಅದನ್ನು ಬೆಳೆಸಬೇಕು ಎಂಬ ಹಂಬಲದಿಂದ ಪ್ರಶಸ್ತಿ ಪ್ರದಾನದಂತಹ ಪ್ರೋತ್ಸಾಹಗಳಿರುತ್ತವೆ. ಕಲೆಗಾಗಿ ದಶಕಗಳ ತಮ್ಮನ್ನು ಅರ್ಪಿಸಿಕೊಂಡು ಬರುವುದು ಸುಲಭದ ಮಾತಲ್ಲ. ಕಾಲನ ಹೊಡೆತಕ್ಕೆ ಕಲೆ ಸಿಲುಕದಂತೆ ಉಳಿಸಿಕೊಳ್ಳಬೇಕು" ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, "ಹಳೆ ತಲೆಮಾರಿನ ಕಲಾವಿದರು ಜೀವನದಲ್ಲಿ ಸಂಕಷ್ಟದಲ್ಲಿದ್ದರೂ ಅದೇ ಕಲೆಯಲ್ಲಿ ತೊಡಗಿಸಿಕೊಂಡು ಕಲಾಸೇವೆಯಲ್ಲಿ ತೊಡಗಿಕೊಂಡು ಇಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದ್ದಾರೆ" ಎಂದಿದ್ದಾರೆ.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕರ್ಣಾಟಕ ಬ್ಯಾಂಕ್ನ ಸಹಾಯಕ ಜನರಲ್ ಮೆನೆಜರ್ ಬಿ. ರಾಜಗೋಪಾಲ್ ತಂತ್ರಿ, ಯಕ್ಷಸಿರಿ ಟ್ರಸ್ಟ್ನ ಡಾ| ಎಚ್. ಎಸ್. ಮೋಹನ್ ಸಾಗರ, ಎಚ್.ಎಸ್. ಮಂಜಪ್ಪ ಸಾಗರ, ಬೇಲ್ತೂರು ರಮೇಶ್ ದಂಪತಿ ಉಪಸ್ಥಿತರಿದ್ದರು.