ಮಂಗಳೂರು, ಅ.26 (DaijiworldNews/HR): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಇಸ್ಕಾನ್ ಕೇಂದ್ರವು ಮಂಗಳವಾರದಂದು ಶ್ರೀಕೃಷ್ಣನ ಕೀರ್ತನೆಗಳನ್ನು ಹಾಡುತ್ತಾ ವಿಶೇಷ ರೀತಿಯ ಪ್ರತಿಭಟನೆಯನ್ನು ನಡೆಸಿದ್ದಾರೆ.
ಇಸ್ಕಾನ್ ಮಂಗಳೂರು ಅಧ್ಯಕ್ಷ ಕಾರುಣ್ಯ ಸಾಗರ ದಾಸ ಮಾತನಾಡಿ, "ಕಳೆದ ಕೆಲವು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆಯುತ್ತಿದ್ದು, ಇಸ್ಕಾನ್ ಮತ್ತು ಇತರ ಸಂಸ್ಥೆಗಳ ದೇವಾಲಯಗಳನ್ನು ಧ್ವಂಸಗೊಳಿಸಿ, ದೇವತೆಗಳನ್ನು ಒಡೆದು ಹಾಕಿ, ದುರ್ಗಾದೇವಿಯ ಪೂಜಾ ಮಂಟಪಗಳನ್ನು ಸುಟ್ಟಿದ್ದಾರೆ. ಹಿಂದೂಗಳ ಅನೇಕ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ಸುಟ್ಟು ಹಾಕಲಾಗಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಮೇಲೆ ಇಂತಹ ದಾಳಿಗಳು ದಶಕಗಳಿಂದ ನಡೆಯುತ್ತಿದ್ದು, ಇದನ್ನು ನಿಲ್ಲಿಸಬೇಕು" ಎಂದರು.
ಇನ್ನು "ಬಾಂಗ್ಲಾದೇಶದಲ್ಲಿ ಇಸ್ಕಾನ್ ಭಕ್ತರು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಅಪ್ರಚೋದಿತ ದಾಳಿಗಳ ಬಗ್ಗೆ ನಾವು ನಮ್ಮ ನೋವು ಮತ್ತು ವೇದನೆಯನ್ನು ವ್ಯಕ್ತಪಡಿಸುತ್ತೇವೆ. ನಾವು ಒಗ್ಗಟ್ಟಿನಿಂದ ಅವರಿಗೆ ಬೆಂಬಲ ಸೂಚಿಸಿ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಮತ್ತು ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ಬಾಂಗ್ಲಾದೇಶ ಸರ್ಕಾರವು ಸಂತ್ರಸ್ತ ಅಲ್ಪಸಂಖ್ಯಾತರ ರಕ್ಷಣೆಯನ್ನು ತಕ್ಷಣವೇ ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದ್ದಾರೆ.
ದೇವಸ್ಥಾನದ ಧರ್ಮಪ್ರಚಾರಕರು, ಇಸ್ಕಾನ್ ಸಭೆಯ ಸದಸ್ಯರು ಮತ್ತು ಇತರ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಸ್ಕಾನ್ ಕೇಂದ್ರದಿಂದ ಕದ್ರಿ ಮೈದಾನದವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಇಸ್ಕಾನ್ ಉದ್ದೇಶಿಸಿತ್ತು. ಆದರೆ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಕೇಂದ್ರದ ಆವರಣದಲ್ಲಿ ಮಾತ್ರ ಪ್ರತಿಭಟನೆ ನಡೆಸಲಾಯಿತು.