ಕಾರ್ಕಳ,ಅ 26 (DaijiworldNews/MS): ಬೋಳ ಗ್ರಾಮದಲ್ಲಿ ಮಹಿಳೆಯೊಬ್ಬರ ಅಂತ್ಯ ಕ್ರಿಯೆ ಕುರಿತು ಇತ್ತಂಡ ನಡುವೆ ವಿವಾದ ಉಂಟಾಗಿ, ಪರಸ್ಪರ ಹೊಡೆದಾಟ ನಡೆದಿದ್ದು, ಪ್ರಕರಣ ವಿಚಾರಣೆ ನಡೆಸಿರುವ ಕಾರ್ಕಳ ೨ನೇ ಹೆಚ್ಚವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರಾದ ಚೇತನಾ ಎಸ್.ಎಫ್ ಮಹತ್ವದ ತೀಪೊಂದನ್ನು ನೀಡಿದ್ದಾರೆ. ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ತೀರ್ಪು ಘೋಷಿಸಿದ್ದಾರೆ.
ವೃತ್ತಿಯಲ್ಲಿ ಅರ್ಚಕರಾಗಿದ್ದ ಬೋಳದ ಚಂದ್ರಶೇಖರ ಇಂದ್ರ ಹಾಗೂ ಅವರ ಮಗ ಮಹಾವೀರ ಜೈನ್ ಒಂದು ಪ್ರಕರಣದಲ್ಲಿ ಆರೋಪಿತರಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ಬೆಳ್ತಂಗಡಿಯ ಹೊಸಂಗಡಿ ಬಸದಿ ಮನೆಯ ಪುಷ್ಪರಾಜ್ ಇಂದ್ರ, ಧರಣೇಂದ್ರ, ವರ್ಧಮಾನ, ಪಾರ್ಶ್ವನಾಥ, ಆದಿರಾಜ ಇಂದ್ರ ಆರೋಪಿಗಳಾಗಿದ್ದರು.
ಘಟನೆಯ ವಿವರ:
2012 ಆಗಸ್ಟ್ 24ರಂದು ಈ ಘಟನೆ ನಡೆದಿತ್ತು.ಚಂದ್ರಶೇಖರ ಇಂದ್ರ ಅವರ ಪತ್ನಿ ಪದ್ಮಾಶ್ರೀಯವರ ಸಹೋದರಿ ಪುಷ್ಪಲತಾ ಎಂಬವರು ಗುಣವಾಗದ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಈ ಕುರಿತು ಚಂದ್ರಶೇಖರ ಇಂದ್ರ ಅವರು ಮೃತರ ಸಹೋದರ ಪುಷ್ಪರಾಜ್ ಅವರಿಗೆ ಮಾಹಿತಿ ನೀಡಿದ್ದರು.
ಪುಷ್ಪರಾಜ್ ಇಂದ್ರ ಹಾಗೂ ಇತರರು ಮೃತ ಮಹಿಳೆಯ ಅಂತ್ಯಸಂಸ್ಕಾರಕ್ಕೆಂದು ಬೋಳ ಗ್ರಾಮದ ಮನೆ ಬಂದಿದ್ದಾಗ ಅದಾಗಲೇ ಮೃತ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟು ಇತ್ತಂಡಗಳ ನಡುವೆ ವಾದ ವಿವಾದಗಳ ವಾಗ್ವಾದ ನಡೆದಾಗ ಚಂದ್ರಶೇಖರ ಇಂದ್ರ ಹಾಗೂ ಅವರ ಮಗ ಮಹಾವೀರ್ ಜೈನ್ ಸೇರಿ ಪುಷ್ಪರಾಜ್ ಇಂದ್ರನ ಮೇಲೆ ಹಲ್ಲೆ ನಡೆಸಿದ್ದರು. ಇನ್ನೊಂದು ಪ್ರಕರಣದಲ್ಲಿ ಚಂದ್ರಶೇಖರ ಇಂದ್ರ ಹಾಗೂ ಅವರ ಮಗ ಮಹಾವೀರ ಜೈನ್ ಅವರ ಮೇಲೆ ಪುಷ್ಪರಾಜ್ ಇಂದ್ರ, ಧರಣೇಂದ್ರ, ವರ್ಧಮಾನ, ಪಾರ್ಶ್ವನಾಥ, ಆದಿರಾಜ ಇಂದ್ರ ಹಲ್ಲೆ ನಡೆಸಿದ್ದರು. ಇತ್ತಂಡದ ಏಳು ಮಂದಿ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಂದು ಕೇಸುದಾಖಲಾಗಿತ್ತು. 1ನೇ ಪ್ರಕರಣದಲ್ಲಿ ಆರೋಪಿಗಳಾದ ಚಂದ್ರಶೇಖರ ಇಂದ್ರ ಹಾಗೂ ಮಹಾವೀರ ಜೈನ್ ಅವರಿಗೆ ಭಾರತೀಯ ದಂಡ ಸಂಹಿತೆಯ ಕಲಂ 323, 324 ಜೊತೆಗೆ ೩೪ರಡಿಯ ಪ್ರತಿಯೊಂದು ಅಪರಾಧಕ್ಕೆ ಸಂಬಂಧಿಸಿ ಕ್ರಮವಾಗಿ ತಲಾ ರೂ.1000 ಮತ್ತು ತಲಾ ರೂ.2000 ದಂಡ ವಿಧಿಸಿ ತೀರ್ಪು ನೀಡಿಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ 1ನೇ ಮತ್ತು 1ನೇ ಆರೋಪಿತರಿಗೆ ಕ್ರಮವಾಗಿ ತಲಾ 15 ದಿನಗಳ ಸಾದಾ ಸಜೆ ಅನುಭವಿಸುವಂತೆ ಅದೇಶ ಮಾಡಿ ತೀರ್ಪು ನೀಡಲಾಗಿದೆ.ಈ ಪ್ರಕರಣದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಜಗದೀಶ ಕೃಷ್ಣ ಜಾಲಿ ವಾದಿಸಿದ್ದಾರೆ.
2ನೇ ಪ್ರಕರಣದಲ್ಲಿ ಆರೋಪಿಗಳಾದ ಪುಷ್ಪರಾಜ್ ಇಂದ್ರ,ಧರಣೇಂದ್ರ, ವರ್ಧಮಾನ, ಪಾರ್ಶ್ವನಾಥ, ಆದಿರಾಜ ಇಂದ್ರ ಅವರಿಗೆ ಭಾರತೀಯ ದಂಡ ಸಂಹಿತೆ 143, 147, 323,506 ಜೊತೆಗೆ 149ರಡಿಯ ಪ್ರತಿಯೊಂದು ಅಪರಾಧಕ್ಕೆ ಸಂಬಂಧಿಸಿ ಕ್ರಮವಾಗಿ ರೂ. 500,ರೂ 1000 ಮತ್ತು ರೂ.500ದಂಡ ವಿಧಿಸಿ ತೀರ್ಪು ನೀಡಲಾಗಿದೆ. ದಂಡ ತೆರಲು ತಪ್ಪಿದಲ್ಲಿ 1ರಿಂದ 4ನೇ ಆರೋಪಿತರಿಗೆ ತಲಾ 15 ದಿನಗಳ ಸದಾ ಸಜೆ ವಿಧಿಸಲಾಗಿದೆ. ವಿಚಾರಣೆ ಅಂತಿಮ ಹಂತದಲ್ಲಿ 5ನೇ ಆರೋಪಿ ಆದಿರಾಜ ಇಂದ್ರ ಮೃತಪಟ್ಟಿರುತ್ತಾರೆ. ಈ ಪ್ರಕರಣದದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಶೋಭಾ ಮಹಾದೇವ ನಾಯ್ಕ ವಾದಿಸಿದರು.