ಪುತ್ತೂರು, ಅ. 25 (DaijiworldNews/SM): ಮಾಸಿಕ ವೇತನ ಪಾವತಿ ಹಾಗೂ ನಿವೃತ್ತ ನೌಕರರ ಸೌಲಭ್ಯ ಪಾವತಿ ಮಾಡುವಲ್ಲಿ ಕೆಎಸ್ಆರ್ ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಎಸ್ಆರ್ ಟಿಸಿ ಮಜ್ದೂರ್ ಸಂಘದ ಸದಸ್ಯರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ ನಗರದ ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಆರಂಭಗೊಂಡಿತು.
ಕೆಎಸ್ಆರ್ ಟಿಸಿ ಪುತ್ತೂರು ವಿಭಾಗದ ಅಧಿಕಾರಿಗಳು ಕೆಎಸ್ಆರ್ ಟಿಸಿ ಮಜ್ದೂರ್ ಸಂಘದ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಸಂಘದ ಸದಸ್ಯರು ಕೆಎಸ್ಆರ್ಟಿಸಿ ವಿಭಾಗ ಕಚೇರಿಯ ಬಳಿ ಮುಷ್ಕರ ನಡೆಸಲು ಬಾರದಂತೆ ನ್ಯಾಯಾಲಯದಲ್ಲಿ ನಿರ್ಬಧಕಾಜ್ಞೆಯನ್ನು ತಂದಿರುತ್ತಾರೆ. ರಾಷ್ಟ್ರೀಯ ಕಾರ್ಮಿಕ ಸಂಘಟನೆಯಾದ ಬಿಎಂಎಸ್ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಇವರ ಆರೋಪಗಳಿಗೆ ಬಿಎಂಎಸ್ ನ್ಯಾಯಾಲಯದಲ್ಲಿ ಉತ್ತರಿಸಲಿದೆ. ಆರೋಪಗಳನ್ನು ಸಂಘಟನೆ ಖಂಡಿಸುತ್ತದೆ ಎಂದು ಪುತ್ತೂರು ವಿಭಾಗ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಗಿರೀಶ್ ಮಳಿ ಹೇಳಿದರು.
ಕೆಎಸ್ಆರ್ ಟಿಸಿ ಮಜ್ದೂರ್ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ನೌಕರ ಮಾಡಾವು ವಿಶ್ವನಾಥ ರೈ, 76 ವರ್ಷ ವಯಸ್ಸಿನ ನಾನು ರಾಷ್ಟಿಯ ವಿಚಾರಗಳಿಗಾಗಿ ಹೋರಾಡುತ್ತಾ ಬಂದವನು. ಕೆಎಸ್ಆರ್ಟಿಸಿ ಅಧಿಕಾರಿಗಳ ನೌಕರ ವಿರೋಧಿ ಧೋರಣೆಯನ್ನು ಖಂಡಿಸಿ ಮಂಗಳವಾರದಿಂದ ನಾನು ಕೂಡಾ ಅಮರಣಾಂತ ಉಪವಾಸ ಕುಳಿತುಕೊಳ್ಳಲಿದ್ದೇನೆ. ನನ್ನ ಜೀವಕ್ಕೆ ಏನಾದರೂ ತೊಂದರೆಯಾದರೆ ಕೆಎಸ್ಆರ್ ಟಿಸಿಯ ಅಧಿಕಾರಿಗಳೇ ನೇರಹೊಣೆ ಎಂದು ಎಚ್ಚರಿಸಿದರು.
ಕೆಎಸ್ಆರ್ಟಿಸಿ ಸಂಸ್ಥೆಯ ಹಿತಾಸಕ್ತಿಗೆ ವಿರುದ್ದವಾಗಿ ಮಜ್ದೂರ್ ಸಂಘವು ಎಂದೂ ವರ್ತಿಸಿಲ್ಲ. ಸಂಸ್ಥೆಗೆ ನಷ್ಟ ಉಂಟು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ವೇತನ ಪಾವತಿ ವಿಚಾರದಲ್ಲಿ ಮತ್ತು ನಿವೃತ್ತಿ ನಂತರದ ಸೌಲಭ್ಯವನ್ನು ನೀಡದೆ ಅನ್ಯಾಯ ಮಾಡುತ್ತಿರುವ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಸವಾಲಾಗಿ ಸ್ವೀಕರಿಸಿ ಅಮರಣಾಂತ ಉಪವಾಸವನ್ನು ಆರಂಭಿಸಿದ್ದೇವೆ ಎಂದು ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ ಹೇಳಿದರು.