ಕಾರ್ಕಳ, ಅ.25 (DaijiworldNews/PY): "ಲೌಕಿಕ ಪ್ರಪಂಚದಲ್ಲಿ ನಾವು ಯಾವುದೇ ಕ್ರಿಯೆಯಲ್ಲಿ ತೊಡಗಿಕೊಂಡಿರುವಾಗಲೂ ಅದರಲ್ಲಿ ಲವಲೇಶವೂ ಕೇಡಿಲ್ಲದೇ, ನಡೆನುಡಿ ಪರಿಶುದ್ಧವಿದ್ದಲ್ಲಿ ಅಲ್ಲಿ ದೈವತ್ವ ನಿರ್ಮಾಣವಾಗುತ್ತದೆ. ಆಗ ನಾವೇ ದೇವರಾಗುತ್ತೇವೆ ಅನ್ನುವುದೇ ಅಲ್ಲಮಪ್ರಭುಗಳ ತತ್ವ ಸಿದ್ಧಾಂತವಾಗಿದೆ" ಎಂಬುದಾಗಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರಾಜಶೇಖರ ಹಳೆಮನೆ ಹೇಳಿದರು.
ಅಲ್ಲಮಪ್ರಭು ಪೀಠ ಕಾಂತಾವರ ಇದರ ಅನುಭವದ ನಡೆ ಅನುಭವದ ನುಡಿ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ನಾ ದೇವನಲ್ಲದೆ ನೀ ದೇವನೇ? ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
"ದೇವರನ್ನು ಪ್ರಶ್ನಿಸಿದರೆ ಕೆಡುಕಾಗಬಹುದೆಂಬ ನಂಬಿಕೆಗೆ ವಿರುದ್ಧವಾಗಿ ಅಲ್ಲಮನಂತಹ ದಾರ್ಶನಿಕರು ದೇವರನ್ನೇ ಪ್ರಶ್ನಿಸುವುದು ಭಾರತದ ತತ್ವಜ್ಞಾನದ ಬಹುದೊಡ್ಡ ಶಕ್ತಿಯಾಗಿದೆ. ನಾವು ಭೌತಿಕವಾಗಿ ಸೃಷ್ಟಿ ಮಾಡಿದ ದೇವರುಗಳಾಗಲಿ, ವಿನ್ಯಾಸಗಳಾಗಲಿ, ನಿರ್ಮಾಣಗಳಾಗಲೀ, ಅಲ್ಲಮನಿಗೆ ಮುಖ್ಯವಾಗುವುದಿಲ್ಲ. ಅಲ್ಲಮ ಅವುಗಳನ್ನೆಲ್ಲ ನಿರಾಕರಿಸುತ್ತಾ ಯಾವ ಹಂಗೂ ಇಲ್ಲದೆ ತನ್ನ ಆತ್ಮಸಾಕ್ಷಿ ಹೇಳಿದಂತೆ ನಿರ್ಭಯವಾಗಿ ತನ್ನ ಅನುಭಾವದ ಸೂಕ್ಷ್ಮಗಳನ್ನು ತಿಳಿಸುತ್ತಾ ಹೋಗಿ ವಿಶ್ವದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಓರ್ವನೆನಿಸಿದ್ದಾನೆ" ಎಂದರು.
ಪೀಠದ ಕಾರ್ಯಾಧ್ಯಕ್ಷ ಯಶೋಧರ್.ಪಿ.ಕರ್ಕೇರಾ ಅಧ್ಯಕ್ಷತೆ ವಹಿಸಿದರು. ಸ್ಥಾಪಕ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲ್ಲೂರು ನಾಗೇಶ ನಿರ್ವಹಿಸಿದರು. ನೂತನವಾಗಿ ಆಯ್ಕೆಗೊಂಡ ಪ್ರಧಾನ ನಿರ್ದೇಶಕ ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿದರು. ಯಶೋಧರ್ ಪಿ ಕರ್ಕೇರಾ ವಂದಿಸಿದರು.
ಪೀಠದ ಕಾರ್ಯಾಧ್ಯಕ್ಷ ಯಶೋಧರ್ ಪಿ. ಕರ್ಕೇರಾ, ಸ್ಥಾಪಕ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಮೊದಲಾದವರು ಉಪಸ್ಥಿತರಿದ್ದರು.