ಕಾರ್ಕಳ, ಅ.24 (DaijiworldNews/PY): "ನಗರದ ವ್ಯಾಪ್ತಿಯಲ್ಲಿ ಮೂಲ ಸೌಕಲರ್ಯ ಒದಗಿಸುವಲ್ಲಿ ಪುರಸಭಾ ಆಡಳಿತ ವರ್ಗ ವಿಫಲಗೊಂಡಿದೆ. ಮಳೆಗಾಲ ಅಂತಿಮಗೊಂಡಿದ್ದರೂ ನಗರದ ರಸ್ತೆಯನ್ನು ದುರಸ್ತಿ ಪಡಿಸಲು ಇನ್ನೂ ಪುರಸಭೆ ಮುಂದಾಗಿಲ್ಲ. ಒಳಚರಂಡಿ ಅಸಮರ್ಪಕ ರೀತಿಯಲ್ಲಿ ನಡೆಸಿದ್ದರ ಪರಿಣಾಮ ರಸ್ತೆಯ ಸ್ಥಿತಿ ಈ ಹಂತಕ್ಕೆ ತಲುಪಿದೆ. ಇಷ್ಟೆಲ್ಲ ಆಗಿ ಜನರಿಗೆ ಸಮಸ್ಯೆಯಾಗುತ್ತಿದ್ದರು ದುರಸ್ತಿ ಬಗ್ಗೆ ಪುರಸಭೆ ಆಡಳಿತ ಗಮನ ಹರಿಸುತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಪುರಸಭೆಯ ಪ್ರತಿಪಕ್ಷ ನಾಯಕ ಆಶ್ಪಕ್ ಅಹಮ್ಮದ್ ಆಗ್ರಹಿಸಿದರು.
ಕಾರ್ಕಳ ಪುರಸಭೆ ವ್ಯಾಪ್ತಿಯ ರಸ್ತೆ ಗುಂಡಿಗಳ ದುಸ್ಥಿತಿ ವಿರುದ್ಧ ಬ್ಲಾಕ್ ಕಾಂಗ್ರೆಸ್, ನಗರ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಭಾನುವಾರ ಮೂರು ಮಾರ್ಗ ಬಳಿ ಹಮ್ಮಿಕೊಂಡಿದ್ದ ಹೊಂಡದ ರಸ್ತೆಯಲ್ಲಿ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ, "ನಗರ ರಸ್ತೆ ಸುಗಮ ಸಂಚಾರಕ್ಕಿಂತ ರ್ಯಾಲಿ ನಡೆಸಲು ಯೋಗ್ಯವಾಗಿದೆ. ಅಭಿವೃದ್ಧಿ ಮಂತ್ರ ಹೇಳಿ ಶಾಸಕ, ಸಚಿವರಾಗಿ ಅಧಿಕಾರ ಹಿಡಿದು ಕೋಟಿ ಅಭಿವೃದ್ಧಿಯ ಜಪ ನಡೆಸುತ್ತಿರುವ ಸಚಿವ ವಿ.ಸುನಿಲ್ಕುಮಾರ್ ಅವರು ಹಾನಗಲ್ ಚುನಾವಣೆಯಲ್ಲಿ ಪ್ರಚಾರ ನಡೆಸುತಿದ್ದಾರೆ. ಇತ್ತ ಸ್ವ-ಕ್ಷೇತ್ರದ ರಸ್ತೆಯೆ ಸ್ಥಿತಿ ಅವರಿಗೆ ಕಂಡಿಲ್ಲ. ತಮ್ಮ ಕ್ಷೇತ್ರದಲ್ಲಿ ದುಪ್ಪಟ್ಟು ಸಮಸ್ಯೆಗಳನ್ನು ಇಟ್ಟುಕೊಂಡು ಇನ್ನೊಂದು ಕ್ಷೇತ್ರದಲ್ಲಿ ಹೋಗಿ ಅಭಿವೃದ್ಧಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯಿದೆಯೇ?" ಎಂದು ಪ್ರಶ್ನಿಸಿದರು.
"ತಮ್ಮದೆ ಆಡಳಿತದ ಪುರಸಭೆ ಆಡಳಿತದಲ್ಲಿದ್ದರೂ ಅವರು ಮೌನ ವಹಿಸಿದ್ದಾರೆ" ಎಂದು ಕಿಡಿಕಾರಿದರು.
"ಇನ್ನಾದರೂ ಸಚಿವರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಸಂಬಂಧಿಸಿ ಸಂಬಂಧ ಪಟ್ಟವರಿಗೆ ಸೂಚಿಸಿ, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು" ಎಂದರು.
ಇದೇ ಸಂದರ್ಭದಲ್ಲಿ ಹೊಂಡಗುಂಡಿಗಳಿರುವ ರಸ್ತೆಯಲ್ಲಿ ಬೈಕ್ ರ್ಯಾಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಪಡೆದವರಿಗೆ ಟ್ರೋಫಿ, ನೋವಿಗೆ ಸವರುವ ಮೂವ್ ಅನ್ನು ವಿತರಿಸಿ ಆಡಳಿತ ವೈಪಲ್ಯವನ್ನು ಅಣಕಿಸಲಾಯಿತು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಪ್ರಮುಖರಾದ ಯೊಗೀಶ್ ಇನ್ನಾ, ಪ್ರಭಾಕರ ಬಂಗೇರ, ಕೃಷ್ಣ ಶೆಟ್ಟಿ ಬಜಗೋಳಿ, ಸುಶಾಂತ್ ಸುಧಾಕರ್, ಆರಿಫ್ ಕಲ್ಲೊಟ್ಟೆ, ನಾಸೀರ್, ಪುರಸಭೆ ಸದಸ್ಯರಾದ ಹರೀಶ್ಕುಮಾರ್, ಪ್ರತಿಮಾ ರಾಣೆ, ಸೋಮನಾಥ ಸಹಿತ ಬ್ಲಾಕ್, ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು.