ಮಂಗಳೂರು, ಅ 24 (DaijiworldNews/MS): ಕುದ್ರೋಳಿಯ ಹೈದರಲಿ ರಸ್ತೆಯಲ್ಲಿದ್ದ ಮನೆಯಿಂದ ಅ.೨೪ ರ ಭಾನುವಾರ ಏಕಾಏಕಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದು ಈಕೆಗಾಗಿ ಸ್ಥಳೀಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.
ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ಸಾಗುತ್ತಿರುವುದು ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ಕುದ್ರೋಳಿಯ ಕಾರ್ಖಾನೆ ಸಮೀಪದ ನದಿಯಲ್ಲಿ ಶೋಧ ನಡೆಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಬಾಲಕಿ ಅಲ್ಪ ಪ್ರಮಾಣದ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಎನ್ನಲಾಗಿದ್ದು ಮನೆಯವರು ಕೆಲಸದಲ್ಲಿ ನಿರತರಾಗಿದ್ದಾಗ ಬಾಗಿಲು ತೆಗೆದು ಹೊರಬಂದಿದ್ದಾಳೆ ಎನ್ನಲಾಗಿದೆ.
ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುದ್ರೋಳಿಯ ನಡುಪಳ್ಳಿ ಕಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸ್ಥಳೀಯ ಕಾರ್ಪೊರೇಟರ್ ಸಂಶುದ್ದೀನ್ ತಿಳಿಸಿದ್ದಾರೆ.