ಕುಂದಾಪುರ, ಅ.23 (DaijiworldNews/HR): ಸರ್ಕಾರ ಮತ್ತು ಟಾಟಾ ಟೆಕ್ನಾಲಜಿಯ ಸಹಭಾಗಿತ್ವದಲ್ಲಿ ಉದ್ಯೋಗ ಎನ್ನುವ ನೂತನ ಕಾರ್ಯಕ್ರಮ ನ.1ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು ಇದರಲ್ಲಿ ಒಂದು ವರ್ಷವಧಿಯ 6 ಕೋರ್ಸ್ಗಳು, ಎರಡು ವರ್ಷವಧಿಯ 5 ಕೋರ್ಸ್ಗಳು ಹಾಗೂ 23 ಅಲ್ಪಾವಧಿ ಕೋರ್ಸುಗಳಿವೆ. ದೇಶದಲ್ಲಿಯೇ ಇಂದು ಕರ್ನಾಟಕದ ಐಟಿಐ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮೇಲ್ದರ್ಜೇಗೆರಿವೆ. ನಮ್ಮೆಲ್ಲ ಜಿಟಿಡಿಸಿ ಪ್ರಸಿದ್ಧ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪಾಲಿಟೆಕ್ನಿಕ್ ಮತ್ತು ಡಿಪ್ಲೋಮಾವನ್ನು ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಸುಧಾರಣೆಯೊಂದಿಗೆ ಮೇಲ್ದರ್ಜೇಗೇರಿವೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಇಡೀ ಜಗತ್ತಿನಲ್ಲಿ ಆವಿಷ್ಕಾರ, ತಂತ್ರಜ್ಞಾನ, ಶಿಕ್ಷಣ, ಸುಧಾರಣೆಯಲ್ಲಿ ವೇಗವಾಗಿ ನಮ್ಮ ರಾಜ್ಯ ಮುನ್ನುಗ್ಗುತ್ತಿದೆ ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಹಾಲ್ಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ನಿರ್ಮಾಣದ ಚಿಂತನೆ ನಡೆಯುತ್ತಿದೆ. ಖಾಸಗಿಯಾಗಿ ಆರಂಭವಾಗುವ ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರ ಸಹಕಾರ ನೀಡಲಿದೆ" ಎಂದರು.
ಕೊರೊನಾ ಲಸಿಕೆಯಲ್ಲಿ ಪ್ರಥಮ ಡೋಸ್ 85% ರಾಜ್ಯದಲ್ಲಿ ಆಗುವ ಮೂಲಕ 5ನೇ ಸ್ಥಾನದಲ್ಲಿದ್ದು, ದ್ವಿತೀಯ ಡೋಸ್ ಈಗಾಗಲೇ 45% ಆಗಿದ್ದು ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.