ಮಂಗಳೂರು, ಅ 23 (DaijiworldNews/MS): ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಮುಖ್ಯ ರಸ್ತೆಯಲ್ಲಿರುವ ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ನಡೆದ ಕಳವು ಯತ್ನ ಹಾಗೂ ಮೂರ್ತಿಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಳಾಯಿ ನಿವಾಸಿ ರೋಹಿತಾಶ್ವ ಬಂಧಿತ ವ್ಯಕ್ತಿ
ಆರೋಪಿ ರೋಹಿತಾಶ್ವ ದೈವಸ್ಥಾನದಲ್ಲಿನ ಹಣ, ಮೌಲ್ಯಯುತ ಸೊತ್ತಿನ ಆಸೆಗೆ ಕಳವು ಕೃತ್ಯ ನಡೆಸಲು ಮುಂದಾಗಿದ್ದಾನೆ. ಆದರೆ, ಏನೂ ದೊರಕದಿರುವ ಹಿನ್ನೆಲೆಯಲ್ಲಿ ಅಲ್ಲಿನ ಮೂರ್ತಿಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿ ದೈವಸ್ಥಾನದ ಕಾಣಿಕೆ ಡಬ್ಬಿ ಮತ್ತು ಕಚೇರಿ ಒಳಗಿರುವ ಕಪಾಟುಗಳನ್ನು ಜಾಲಾಡಿದ್ದಾನೆ. ಆದರೆ, ಏನೂ ದೊರಕದಿದ್ದಾಗ ಹತಾಶೆಗೊಂಡು ಅಲ್ಲಿದ್ದ ಶಿವಲಿಂಗ, ನಾಗದೇವರ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾನೆ. ಈ ಸಂಬಂಧ ಅ. 17ರಂದು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.